ಸಾಧ್ಯವಾದಷ್ಟು ಬೇಗ ತರಬೇತಿಗೆ ಅನುವು ಮಾಡಿಕೊಡಬೇಕೆಂದು ಭಾರತದ ಪ್ರಮುಖ ವೇಟ್ಲಿಫ್ಟರ್ಗಳು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರಿಗೆ ಮನವಿ ಮಾಡಿದ್ದಾರೆ.
ಕೊರೊನಾ ವೈರಾಣು ಹರಡುವ ಭೀತಿಯಿಂದಾಗಿ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಎಲ್ಲಾ ಕೇಂದ್ರಗಳಲ್ಲೂ ತರಬೇತಿಗೆ ತಡೆಯೊಡ್ಡಲಾಗಿದೆ.
ಪಟಿಯಾಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ (ಎನ್ಐಎಸ್) ಕೇಂದ್ರದಲ್ಲಿರುವ ವೇಟ್ಲಿಫ್ಟರ್ಗಳ ಜೊತೆ ರಿಜಿಜು ಅವರು ಸೋಮವಾರ ವಿಡಿಯೊ ಕಾನ್ಫರೆನ್ಸ್ ನಡೆಸಿದರು.
‘ಫಿಟ್ನೆಸ್ ಕಾಪಾಡಿಕೊಳ್ಳಲು ಅಗತ್ಯವಿರುವ ವ್ಯಾಯಾಮಗಳನ್ನು ನಾವು ಮಾಡುತ್ತಿದ್ದೇವೆ. ನಿತ್ಯವೂ ಭಾರ ಎತ್ತುವುದನ್ನು ಅಭ್ಯಾಸ ಮಾಡುವುದು ಅತ್ಯವಶ್ಯ. ಹೀಗಾಗಿ ಸಾಧ್ಯವಾದಷ್ಟು ಬೇಗ ತರಬೇತಿ ಶಿಬಿರಗಳನ್ನು ಪುನರಾರಂಭಿಸುವಂತೆ ಮನವಿ ಮಾಡಿದ್ದೇವೆ’ ಎಂದು ವಿಶ್ವಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿರುವ ಮೀರಾಬಾಯಿ ಚಾನು ತಿಳಿಸಿದ್ದಾರೆ.
‘ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ವಾರದೊಳಗೆ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ’ ಎಂದೂ ಮೀರಾಬಾಯಿ ನುಡಿದಿದ್ದಾರೆ.
‘ತರಬೇತಿ ಶಿಬಿರಗಳು ಸ್ತಬ್ಧಗೊಂಡು ಎರಡು ತಿಂಗಳಾಗುತ್ತಾ ಬಂದಿದೆ. ತರಬೇತಿ ಇಲ್ಲದೇ ವೇಟ್ಲಿಫ್ಟರ್ಗಳ ಮಾಂಸಖಂಡಗಳು ಬಲ ಕಳೆದುಕೊಳ್ಳುತ್ತಿವೆ. ಎನ್ಐಎಸ್ ಆವರಣವನ್ನು ಸೀಲ್ ಮಾಡಿರುವ ಕಾರಣ ಯಾರೂ ಒಳಗೆ ಬರುವಂತಿಲ್ಲ. ಜೊತೆಗೆ ನಾವು ಕೂಡ ಹೊರಗೆ ಹೋಗುವಂತಿಲ್ಲ’ ಎಂದು ರಾಷ್ಟ್ರೀಯ ವೇಟ್ಲಿಫ್ಟಿಂಗ್ ಕೋಚ್ ವಿಜಯ್ ಶರ್ಮಾ ಹೇಳಿದ್ದಾರೆ.
‘ನಾವು ತರಬೇತಿ ನಡೆಸುವ ಹಾಲ್ ವಿಸ್ತಾರವಾಗಿದೆ. ಪ್ರತಿಯೊಬ್ಬರೂ ಪರಸ್ಪರ ಐದು ಮೀಟರ್ ಅಂತರ ಕಾಯ್ದುಕೊಂಡು ಅಭ್ಯಾಸ ಮಾಡಲು ಯಾವುದೇ ತೊಂದರೆಯಾಗುವುದಿಲ್ಲ’ ಎಂದಿದ್ದಾರೆ.
ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪ್ರಧಾನ್, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಕಾರ್ಯದರ್ಶಿ ರವಿ ಮಿತ್ತಲ್, ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಾಪ್ಸ್) ಹಾಗೂ ಭಾರತ ವೇಟ್ಲಿಫ್ಟಿಂಗ್ ಫೆಡರೇಷನ್ನ ಅಧಿಕಾರಿಗಳೂ ವಿಡಿಯೊ ಕಾನ್ಫರೆನ್ಸ್ನಲ್ಲಿ ಪಾಲ್ಗೊಂಡಿದ್ದರು.
ಮೀರಾಬಾಯಿ, ಯೂತ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿರುವ ಜೆರೆಮಿ ಲಾಲ್ರಿನುಂಗಾ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕಗಳನ್ನು ಜಯಿಸಿರುವ ಸತೀಶ್ ಶಿವಲಿಂಗಂ ಸೇರಿದಂತೆ ಒಟ್ಟು ಒಂಬತ್ತು ಮಂದಿ ವೇಟ್ಲಿಫ್ಟರ್ಗಳು ಎನ್ಐಎಸ್ ಕೇಂದ್ರದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.