ಧಾರವಾಡ: ಶ್ರೇಯಾಂಕಕ್ಕೆ ನ್ಯಾಯ ಸಿಗುವಂತೆ ಆಡಿದ ಮೊದಲ ನಾಲ್ಕು ಶ್ರೇಯಾಂಕದ ಆಟಗಾರರು, ಇಲ್ಲಿ ನಡೆಯುತ್ತಿರುವ ಐಟಿಎಫ್ ಟೆನಿಸ್ ಟೂರ್ನಿಯಲ್ಲಿ ಶುಕ್ರವಾರ ಸಿಂಗಲ್ಸ್ ಸೆಮಿಫೈನಲ್ ತಲುಪಿದರು. ಭಾರತದ ಇಬ್ಬರು ಆಟಗಾರರು– ದಿಗ್ವಿಜಯ ಪ್ರತಾಪ್ ಸಿಂಗ್ ಮತ್ತು ರಾಮಕುಮಾರ್ ರಾಮನಾಥನ್ ಇವರಲ್ಲಿ ಒಳಗೊಂಡಿದ್ದಾರೆ.
ಧಾರವಾಡ ಜಿಲ್ಲಾ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ₹20.7 ಲಕ್ಷ ಬಹುಮಾನದ ಈ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕದ ನಿಕ್ ಚಾಪೆಲ್ (ಅಮೆರಿಕ) ಅವರು ಕ್ವಾರ್ಟರರ್ಫೈನಲ್ನಲ್ಲಿ ಅಮೋಘ ಕೌಶಲ ಪ್ರದರ್ಶಿಸಿ 6–2, 6–4 ರಿಂದ ಏಳನೇ ಶ್ರೇಯಾಂಕದ ಸಿದ್ಧಾರ್ಥ ರಾವತ್ ಅವರನ್ನು ಸೋಲಿಸಿದರು.
ಕುತೂಹಲ ಕೆರಳಿಸಿದ ಇನ್ನೊಂದು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ರಷ್ಯದ ಆಟಗಾರ, ಎರಡನೇ ಶ್ರೇಯಾಂಕದ ಬೊಗ್ದಾನ್ ಬೊಬ್ರೊವ್ 7–6 (6), 7–6 (3) ರಿಂದ ಆರನೇ ಶ್ರೇಯಾಂಕದ ಫ್ಲೊರೆಂಟ್ ಬಾಕ್ಸ್ (ಫ್ರಾನ್ಸ್) ಅವರನ್ನು ಹಿಮ್ಮೆಟ್ಟಿಸಿದರು. ಗೆಲುವಿಗೆ ಬೊಬ್ರೊವ್ ಸುಮಾರು ಎರಡು ಗಂಟೆ ತೆಗೆದುಕೊಂಡರು.
ಮೂರನೇ ಶ್ರೇಯಾಂಕದ ದಿಗ್ವಿಜಯ್ ಪ್ರತಾಪ್ ಸಿಂಗ್ 6–4, 6–7 (3), 6–2 ರಿಂದ ಐದನೇ ಶ್ರೇಯಾಂಕದ ಕಝುಕಿ ನಿಶಿವಾಕಿ (ಜಪಾನ್) ಅವರನ್ನು ಸೋಲಿಸುವ ದಾರಿಯಲ್ಲಿ ಬೆವರುಹರಿಸಬೇಕಾಯಿತು.
ನಾಲ್ಕನೇ ಶ್ರೇಯಾಂಕದ ರಾಮಕುಮಾರ್ ರಾಮನಾಥನ್ ಛಲದ ಆಟವಾಡಿ ಎಂಟನೇ ಶ್ರೇಯಾಂಕದ ಎಸ್.ಡಿ.ಪ್ರಜ್ವಲ್ ದೇವ್ (ಕರ್ನಾಟಕ) ಅವರನ್ನು 6–4, 4–6, 6–1 ರಿಂದ ಸೋಲಿಸಿ ಅಂತಿಮ ನಾಲ್ಕರ ಘಟ್ಟಕ್ಕೆ ಮುನ್ನಡೆದರು.
ಸೆಮಿಫೈನಲ್ನಲ್ಲಿ ರಾಮಕುಮಾರ್, ಎಡಗೈ ಆಟಗಾರ ಚಾಪೆಲ್ ಅವರನ್ನು, ಬೊಬ್ರೊವ್, ದಿಗ್ವಿಜಯ್ ಅವರನ್ನು ಎದುರಿಲಿದ್ದಾರೆ.
ಡಬಲ್ಸ್ ಫೈನಲ್ ಶನಿವಾರ ನಡೆಯಲಿದೆ. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ, ಶ್ರೇಯಾಂಕರಹಿತ ಜೋಡಿ ಸಾಯಿ ಕಾರ್ತಿಕ್ ರೆಡ್ಡಿ ಗಂಟಾ–ಮನೀಷ್ ಸುರೇಶ್ ಕುಮಾರ್ 3–6, 7–6 (3), 11–13 ರಿಂದ ನಾಲ್ಕನೇ ಶ್ರೇಯಾಂಕದ ಸಿದ್ಧಾಂತ್ ಬಂಥಿಯಾ–ವಿಷ್ಣುವರ್ಧನ್ ಅವರನ್ನು ಸೋಲಿಸಿದರೆ, ಮೂರನೇ ಶ್ರೇಯಾಂಕದ ಪ್ರಜ್ವಲ್ ದೇವ್–ನಿತಿನ್ ಕುಮಾರ್ ಸಿನ್ಹಾ ಜೋಡಿ 6–3, 6–3 ರಿಂದ ದಿಗ್ವಿಜಯ್ ಪ್ರತಾಪ್ ಸಿಂಗ್– ಕರಣ್ ಸಿಂಗ್ ಜೋಡಿಯನ್ನು ಸೋಲಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.