ನವದೆಹಲಿ: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯಗಳ ವರದಿಗಾರಿಕೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಡಿಜಿಟಲ್ ತಂಡದ ಜತೆ ಹೈದರಾಬಾದ್ಗೆ ಬಂದಿದ್ದ ಪಾಕಿಸ್ತಾನದ ಕ್ರೀಡಾ ನಿರೂಪಕಿ ಝೈನಬ್ ಅಬ್ಬಾಸ್ ಅವರು ಇತ್ತೀಚೆಗೆ ದೇಶ ಬಿಟ್ಟು ತೆರಳಿದ್ದರು. ಈ ಘಟನೆ ಕುರಿತು ಇದೀಗ ಅವರು ಮೌನ ಮುರಿದಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ನಾನು ಇಷ್ಟಪಡುವ ಕ್ರೀಡೆಗಾಗಿ ಇತರೆ ದೇಶಗಳಿಗೆ ಪ್ರಯಾಣಿಸಲು ಮತ್ತು ಪ್ರಸ್ತುತಪಡಿಸುವ ಅವಕಾಶಗಳಿಗಾಗಿ ನಾನು ಅತ್ಯಂತ ಅದೃಷ್ಟಶಾಲಿಯಾಗಿದ್ದು, ಕೃತಜ್ಞತೆಯನ್ನು ಹೊಂದಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಇದೇ ವೇಳೆ ನನ್ನನ್ನು ಭಾರತದಿಂದ ಗಡೀಪಾರು ಮಾಡಿಲ್ಲ. ಅಲ್ಲಿಂದ (ಭಾರತದಿಂದ) ಹೊರಹೋಗುವಂತೆ ಯಾರೂ ಕೂಡ ಹೇಳಿಲ್ಲ ಎಂದು ಅಬ್ಬಾಸ್ ಸ್ಪಷ್ಟಪಡಿಸಿದ್ದಾರೆ.
— zainab abbas (@ZAbbasOfficial) October 12, 2023
ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯಗಳ ವರದಿಗಾರಿಕೆಗೆ ಐಸಿಸಿ ಡಿಜಿಟಲ್ ತಂಡದ ಜತೆ ಹೈದರಾಬಾದ್ಗೆ ಬಂದಿದ್ದ ಪಾಕಿಸ್ತಾನದ ಕ್ರೀಡಾ ನಿರೂಪಕಿ ಝೈನಬ್ ಅಬ್ಬಾಸ್ ಅವರು ಅ.9ರಂದು (ಸೋಮವಾರ) ದೇಶ ಬಿಟ್ಟು ತೆರಳಿದ್ದರು.
ಝೈನಬ್ ಈ ಹಿಂದೆ ನೀಡಿದ್ದ ಭಾರತ ವಿರೋಧಿ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ಹರಿದಾಡಿದ್ದು, ಅಭದ್ರತೆ ಕಾಡಿದ್ದರಿಂದ ಅವರು ಭಾರತ ಪ್ರವಾಸ ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ ಎನ್ನಲಾಗಿತ್ತು. ಆದರೆ ವೈಯಕ್ತಿಕ ಕಾರಣಗಳಿಂದ ಭಾರತ ತೊರೆದಿದ್ದಾರೆ ಎಂದು ಐಸಿಸಿ ಹೇಳಿದ್ದು, ಅವರನ್ನು ಗಡಿಪಾರು ಮಾಡಲಾಗಿದೆ ಎಂಬ ಸುದ್ದಿಯನ್ನು ಅಲ್ಲಗಳೆದಿತ್ತು.
ವಿಶ್ವಕಪ್ ಟೂರ್ನಿಯ ವರದಿಗಾರಿಕೆಗೆ ಭಾರತಕ್ಕೆ ಪ್ರಯಾಣಿಸುವುದಾಗಿ ಅವರು ‘ಎಕ್ಸ್’ ಖಾತೆಯಲ್ಲಿ ಪ್ರಕಟಿಸಿದ್ದರು. ಅದರ ಬೆನ್ನಲ್ಲೇ ಅವರ ಹಳೆಯ ಟ್ವೀಟ್ಗಳು ಹರಿದಾಡಿದ್ದವು. ಕಳೆದ ವಾರ ಹೈದರಾಬಾದ್ಗೆ ಬಂದಿಳಿದಿದ್ದ ಅವರು, ಪಾಕ್– ನೆದರ್ಲೆಂಡ್ಸ್ ಪಂದ್ಯದ ವೇಳೆ ರಾಜೀವ್ಗಾಂಧಿ ಕ್ರೀಡಾಂಗಣದಲ್ಲಿ ಹಾಜರಿದ್ದರು. ಪಾಕಿಸ್ತಾನ ತಂಡದ ಪಂದ್ಯಗಳ ವರದಿಗಾರಿಕೆಗಾಗಿ ಅವರು ಬೆಂಗಳೂರು, ಚೆನ್ನೈ ಮತ್ತು ಅಹಮದಾಬಾದ್ಗೂ ಪ್ರಯಾಣಿಸಬೇಕಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.