ಟೋಕಿಯೊ (ಪಿಟಿಐ): ಅಜಯ್ ಜಯರಾಮ್, ಕೆ. ಶ್ರೀಕಾಂತ್ ಮತ್ತು ಎಚ್.ಎಸ್. ಪ್ರಣೋಯ್ ಅವರು ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಅನುಭವಿಸಿದರು. ಇದರೊಂದಿಗೆ ಈ ಟೂರ್ನಿಯಲ್ಲಿ ಭಾರತದ ಸವಾಲಿಗೆ ತೆರೆಬಿತ್ತು.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಪ್ರಣೋಯ್ 11-21, 22-20, 13-21 ರಲ್ಲಿ ಚೀನಾದ ಹುವಾನ್ ಗಾವೊ ಕೈಯಲ್ಲಿ ಪರಾಭವಗೊಂಡರು. ಪ್ರಣೋಯ್ ಸೋಲು ಅನುಭವಿಸುವ ಮುನ್ನ ಎದುರಾಳಿಗೆ ತಕ್ಕ ಪೈಪೋಟಿ ನೀಡಿದರು.
ಐದನೇ ಶ್ರೇಯಾಂಕದ ಆಟಗಾರ ವಿಯೆಟ್ನಾಂನ ತಿಯಾನ್ ಮಿನ್ ನುಯೆನ್ 21-18, 21-13 ರಲ್ಲಿ ಅಜಯ್ ಜಯರಾಮ್ ಅವರನ್ನು ಮಣಿಸಿದರು. ವಿಶ್ವ ರ್ಯಾಂಕಿಂಗ್ ನಲ್ಲಿ 30ನೇ ಸ್ಥಾನದಲ್ಲಿರುವ ಅಜಯ್ 40 ನಿಮಿಷಗಳಲ್ಲಿ ಸೋಲು ಅನುಭವಿಸಿದರು.
ಶ್ರೀಕಾಂತ್ 18-21, 9-21 ರಲ್ಲಿ ಜಪಾನ್ನ ಕೆನಿಚಿ ತಾಗೊ ಕೈಯಲ್ಲಿ ಪರಾಭವಗೊಂಡರು. ಇಲ್ಲಿ ಏಳನೇ ಶ್ರೇಯಾಂಕ ಪಡೆದಿರುವ ಕೆನಿಚಿ 39 ನಿಮಿಷಗಳಲ್ಲಿ ಗೆಲುವು ತಮ್ಮದಾಗಿಸಿ ಕೊಂಡರು.
ಮಹಿಳೆಯರ ವಿಭಾಗದಲ್ಲಿ ಪಿ.ವಿ.ಸಿಂಧು ಎರಡನೇ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು. ಈ ಟೂರ್ನಿಯಲ್ಲಿ ಸೈನಾ ನೆಹ್ವಾಲ್ ಪಾಲ್ಗೊಂಡಿರಲಿಲ್ಲ.