ಒರ್ಡೊಸ್, ಚೀನಾ (ಪಿಟಿಐ): ಭಾರತ ತಂಡದವರು ಶನಿವಾರ ಇಲ್ಲಿ ಆರಂಭವಾಗಲಿರುವ ಚೊಚ್ಚಲ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಆತಿಥೇಯ ಚೀನಾ ತಂಡವನ್ನು ಎದುರಿಸಲಿದ್ದಾರೆ. ಈ ಟೂರ್ನಿ ಸೆಪ್ಟೆಂಬರ್ 11ರವರೆಗೆ ನಡೆಯಲಿದೆ.
ಫಾರ್ವರ್ಡ್ ಆಟಗಾರ ರಾಜ್ಪಾಲ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ. ನೂತನ ಕೋಚ್ ಮೈಕಲ್ ನಾಬ್ಸ್ಗೆ ಇದು ಮೊದಲ ಸವಾಲು. ವಿವಾದದ ಕೊಳದಲ್ಲಿ ಮುಳುಗಿ ಹೋಗಿರುವ ಭಾರತ ತಂಡದ ಮುಂದೆ ದೊಡ್ಡ ಸವಾಲು ಇದೆ.
ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ (ಎಸ್ಎಐ) ನಡೆದ ಶಿಬಿರದಲ್ಲಿ ಒಂದೂವರೆ ತಿಂಗಳು ಅಭ್ಯಾಸ ನಡೆಸಿರುವ ರಾಜ್ಪಾಲ್ ಪಡೆ ಪ್ರಮುಖ ಆಟಗಾರರಿಲ್ಲದೇ ಇಲ್ಲಿಗೆ ಆಗಮಿಸಿದೆ. ಗಾಯದ ಕಾರಣ ಅರ್ಜುನ್ ಹಾಲಪ್ಪ ಅಲಭ್ಯರಾಗಿದ್ದಾರೆ. ಅಶಿಸ್ತಿನ ವರ್ತನೆ ಕಾರಣ ಸಂದೀಪ್ ಸಿಂಗ್ ಹಾಗೂ ಸರ್ದಾರ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ.