ಹೆಸರಘಟ್ಟ: ದೊಡ್ಡ ಬ್ಯಾಲಕೆರೆ ಗ್ರಾಮದಲ್ಲಿ ಬಿಡಿಎ ಅಧಿಕಾರಿಗಳ ವಿರುದ್ದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಯು ನಡೆಸುತ್ತಿರುವ ಸರಣಿ ಸತ್ಯಾಗ್ರಹಕ್ಕೆಗಾಣಿಗರಹಳ್ಳಿ, ಸೋಮಶೆಟ್ಟಿಹಳ್ಳಿ ಗ್ರಾಮಗಳ ಮಹಿಳೆಯರು ಬೆಂಬಲ ನೀಡಿ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು.
‘2008ರಲ್ಲಿ ಬಿಡಿಎ ಮನೆ ಕಟ್ಟಿಕೊಳ್ಳಲು ಅನುಮತಿ ನೀಡಿತ್ತು. ಸುಮಾರು ₹ 30 ಲಕ್ಷ ಸಾಲ ಮಾಡಿ ಮನೆ ಕಟ್ಟಿದ್ದೇವೆ. ಈಗ ಮನೆ ಕೆಡವಬೇಕು ಎಂದು ಕೋರ್ಟ್ ತೀರ್ಪು ಬಂದಿದೆ. ಅಂದು ಯಾಕೆ ಕಟ್ಟಡ ಕಟ್ಟಲು ಅನುಮತಿ ನೀಡಿದ್ದೀರಿ? ಮನೆ ಕಡವಿದರೆ ಬ್ಯಾಂಕ್ ಸಾಲ ತೀರಿಸುವುದು ಹೇಗೆ?’ ಎಂದು ಸೋಮಶೆಟ್ಟಿ ಹಳ್ಳಿ ಗ್ರಾಮದ ನಿವಾಸಿ ಸತೀಶ್ ತಮ್ಮ ಅಳಲು ತೋಡಿಕೊಂಡರು.
‘ಪ್ರತಿ ದಿನ ನಮ್ಮ ಮನೆಯವರು ಕೊರಗುವುದನ್ನು ನೋಡಲಾಗುತ್ತಿಲ್ಲ. ಸರ್ಕಾರ ಶಿವರಾಮ ಕಾರಂತರ ಬಡಾವಣೆ ಬಗ್ಗೆ ಯೋಚನೆ ಮಾಡಿ ನಿಲುವು ತೆಗೆದು ಕೊಳ್ಳಬೇಕು. ಇಲ್ಲದಿದ್ದರೆ ಅಹೋರಾತ್ರಿ ಧರಣಿಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇವೆ’ ಎಂದು ಮಾರುತಿ ನಗರದ ಮಹಿಳೆ ಸರೋಜಮ್ಮ ಹೇಳಿದರು.
ಹಸಿರು ಸೇನೆ ಅಧ್ಯಕ್ಷರಾದ ಸಂಜುಂಡಪ್ಪ ಮಾತನಾಡಿ, ‘ರೈತರ ಈ ಹೋರಾಟಕ್ಕೆ ಮಹಿಳೆಯರು ಸಾಥ್ ನೀಡುತ್ತಿರುವುದು ನಿಜಕ್ಕೂ ಹೋರಾಟಕ್ಕೆ ಹೊಸ ರೂಪ ಬಂದಿದೆ. ನಮ್ಮ ಧ್ವನಿಗೆ ಕಿವಿಗೊಡದೇ ಹೋದರೆ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ ಮಾಡಲಾಗುವುದು’ ಎಂದರು.