ಚಿಕ್ಕಮಗಳೂರು: ತಾಲ್ಲೂಕಿನ ಮೆಣಸಿನ ಮಲ್ಲೇದೇವರಹಳ್ಳಿಯಲ್ಲಿ ಮಲ್ಲೇಶ್ವರಸ್ವಾಮಿ ಮತ್ತು ವೀರಭದ್ರೇಶ್ವರ ಸ್ವಾಮಿ ದೇವರ ಕೆಂಡೋತ್ಸವ ಮಂಗಳವಾರ ಶ್ರದ್ಧಾ, ಭಕ್ತಿಯಿಂದ ಜರುಗಿತು.
ಉತ್ಸವದ ನಿಮಿತ್ತ ಮಲ್ಲೇಶ್ವರಸ್ವಾಮಿ, ವೀರಭದ್ರೇಶ್ವರ ಸ್ವಾಮಿ ಮೂರ್ತಿಗಳಿಗೆ ರುದ್ರಾಭಿಷೇಕ, ವಿಶೇಷ ಅಲಂಕಾರ, ಪೂಜೆ ನಡೆಯಿತು. ನಂತರ ಅಡ್ಡಪಲ್ಲಕ್ಕಿಯಲ್ಲಿ ಪಾರ್ವತಿ ಪರಮೇಶ್ವರ ಹಾಗೂ ಮಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು.
ಗ್ರಾಮದ ಚಿಲುಮೆ ಬಾವಿಯ ಬಳಿಗೆ ಗ್ರಾಮೀಣ ವಾದ್ಯಗಳ ನಡುವೆ ಅಡ್ಡಪಲ್ಲಕ್ಕಿಯನ್ನು ಕೊಂಡೊಯ್ದು ಗಂಗಾಪೂಜೆ ನೆರವೇರಿಸಲಾಯಿತು. ಬಳಿಕ ಮಲ್ಲೇಶ್ವರಸ್ವಾಮಿ ದೇಗುಲದ ಮುಂಭಾಗ ಪಲ್ಲಕ್ಕಿ ಹೊತ್ತ ಭಕ್ತರು ಕೆಂಡದ ರಾಶಿ ಆಯ್ದರು. ಮಧ್ಯಾಹ್ನ ಗ್ರಾಮದಲ್ಲಿ ದುರ್ಗಾದೇವಿ ಪೂಜೆ, ಸಂಜೆ ಪಾರ್ವತಿ ಪರಮೇಶ್ವರರ ಕಲ್ಯಾಣೋತ್ಸವ, ಓಕಳಿ ಉತ್ಸವ ನಡೆಯಿತು.
ಉತ್ಸವದ ಪ್ರಯುಕ್ತ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಗ್ರಾಮದ ಮುಖಂಡರಾದ ಎಂ.ಸಿ.ರುದ್ರಪ್ಪ, ಎಂ.ಉಮೇಶ್, ಪಂಚಾಕ್ಷರಿ, ಎಂ.ಬಿ.ಅಶೋಕ್ಕುಮಾರ್, ಚಂದ್ರಶೇಖರ್, ಭದ್ರಪ್ಪ, ಷಡಕ್ಷರಿ, ಚಂದ್ರಶೇಖರ್ ಗೇಟಿ, ಪ್ರಶಾಂತ್, ತೋಟಪ್ಪ, ರೇವಣ್ಣ, ವೀರಭದ್ರಪ್ಪ ಇದ್ದರು.