ಅಶಿಸ್ತು ನಿಗ್ರಹಿಸದಿದ್ದರೆ ಕೇಂದ್ರ ಸಂಪುಟಕ್ಕೇ ಸಂಚಕಾರ
ಅಹಮದಾಬಾದ್, ಸೆ. 7– ‘ಮತ ಸ್ವಾತಂತ್ರ್ಯ’ಕ್ಕಾಗಿ ಮಾಡಿದ ಒತ್ತಾಯವನ್ನು ‘ಮರೆಯಿಸಿ’ ಕಾಂಗ್ರೆಸ್ಸಿನ ಸದಸ್ಯ ವರ್ಗದಲ್ಲಿ ತುಂಬಿರುವ ‘ಅಶಸ್ತಿನ ವಿಷವನ್ನು’ ಸಕಾಲದಲ್ಲಿ ತಡೆಗಟ್ಟಿ ಮತ್ತೆ ಶಿಸ್ತನ್ನು ಸ್ಥಾಪಿಸದಿದ್ದರೆ ಕೇಂದ್ರದಲ್ಲೂ ಕಾಂಗ್ರೆಸ್ ಸರಕಾರ ಒಂದು ದಿನ ಪತನವಾಗಬಹುದೆಂದು ಮಾಜಿ ಉಪ ಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ಎಚ್ಚರಿಕೆ ನೀಡಿದರು.
ಪ್ರೆಸ್ಕ್ಲಬ್ನ ಸಭೆಯೊಂದರಲ್ಲಿ ಮಾತನಾಡಿದ ಶ್ರೀ ದೇಸಾಯಿ ಅವರು ಈ ಪರಿಸ್ಥಿತಿಯಿಂದ ತಮಗೆ ಚಿಂತೆಯಾಗಿದೆಯೆಂದು ತಿಳಿಸಿದರು. ಕೇಂದ್ರದಲ್ಲಿ ಸದ್ಯದಲ್ಲಿ ಕಾಂಗ್ರೆಸ್ಸಿಗೆ ಬಹುಮತವಿರುವುದರಿಂದ ಪದಚ್ಯುತಗೊಳ್ಳುವ ಪ್ರಶ್ನೆ ಏಳುವುದಿಲ್ಲ. ಆದರೆ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಸುಮಾರು 60 ಜನ ಕಾಂಗ್ರೆಸ್ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಕೊಟ್ಟಿರುವಂತಿಲ್ಲ. ಸರಕಾರದ ವಿರುದ್ಧ ಅವಿಶ್ವಾಸ ಸೂಚನೆ ಬಂದಾಗ ಇಂತಹ ‘ಮತಾಂತರ’ದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದರು.
ಲಿಮಯೆ ಆರೋಪಗಳ ಸಾರ್ವಜನಿಕ ಚರ್ಚೆಗೆ ಸಿದ್ಧ
ಅಹಮದಾಬಾದ್, ಸೆ. 8– ಸಂಯುಕ್ತ ಸಮಾಜವಾದಿ ಪಕ್ಷದ ನಾಯಕ ಶ್ರೀ ಮಧುಲಿಮಯೆ ಅವರು ತಮ್ಮ ವಿರುದ್ಧ ಸಂಸತ್ತಿನಲ್ಲಿ ಹೇರಿದ ಆರೋಪಗಳನ್ನು ಕುರಿತು ಸಾರ್ವಜನಿಕ ಚರ್ಚೆಗೆ ’ನಾನು ಸೈ’ ಮಾಜಿ ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ಇಲ್ಲಿ ತಿಳಿಸಿದರು.
ಇಂತಹ ಚರ್ಚೆಗೆ ತಾವು ಆಹ್ವಾನವನ್ನು ಅಂಗೀಕರಿಸುವ ಮೊದಲು ಬಜೆಟ್ ಅಧಿವೇಶನಾನುಸಾರ ತಾವು ಪತ್ರಿಕಾಗೋಷ್ಠಿಯೊಂದರಲ್ಲಿ ಹಾಕಿದ ಪ್ರಶ್ನೆಗಳಿಗೆ ಶ್ರೀ ಲಿಮಯೆಉತ್ತರ ಕೊಡಬೇಕೆಂದು ಶ್ರೀ ದೇಸಾಯಿ ನುಡಿದರು.
ಸಿಂಡಿಕೇಟ್ ವಿಶೇಷ ಸಭೆ: ಬಿಕ್ಕಟ್ಟು ಪರಿಹಾರ ಮಾರ್ಗ ಪರಶೀಲನೆಗೆ ಪ್ರಯತ್ನ
ಬೆಂಗಳೂರು, ಸೆ. 7– ಬೆಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ನ ವಿಶೇಷ ಸಭೆಯು ಇಂದು ಸಂಜೆ ಸುಮಾರು ಮೂರು ಗಂಟೆಗಳ ಕಾಲ ನಡೆದು ಶ್ರೀ ವೈ. ರಾಮಚಂದ್ರರವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯ ವರದಿಯನ್ನು ಪರಿಶೀಲಿಸಿತು.
ವಿದ್ಯಾರ್ಥಿಗಳ ಬೇಡಿಕೆ ಸಂಬಂಧದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳೊಡನೆ ಮಾತುಕತೆ ನಡೆಸಿದ ಸಮಿತಿಯು ಇಂದು ವರದಿಯನ್ನು ಒಪ್ಪಿಸಿತು.
ಸಿಂಡಿಕೇಟ್ ಸಭೆ ಸೋಮವಾರ ಸಂಜೆ ನಡೆಯುವುದೆಂದು ಮೊದಲು ತಿಳಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.