ಬೆಂಗಳೂರು: ಮಹಾಲಕ್ಷ್ಮಿಲೇಔಟ್ ಸರ್ವಿಸ್ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ದುಷ್ಕರ್ಮಿಗಳಿಬ್ಬರು ಸುರೇಶ್ ಎಂಬುವರಿಂದ ₹ 8 ಲಕ್ಷ ದೋಚಿದ್ದಾರೆ.
ಮಾಗಡಿ ರಸ್ತೆಯ ಅಂಜನಾನಗರ ನಿವಾಸಿಯಾದ ಸುರೇಶ್, ಚಿಕ್ಕನಾಯಕನಹಳ್ಳಿಯಲ್ಲಿ ಅಡಿಕೆ ಕೃಷಿಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಅವರ ಬಳಿ ₹ 8 ಲಕ್ಷ ಮೌಲ್ಯದ ಅಡಿಕೆ ಖರೀದಿಸಿದ್ದ ವ್ಯಾಪಾರಿಯೊಬ್ಬರು, ಹಣವನ್ನು ಸುರೇಶ್ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು.
ಮಧ್ಯಾಹ್ನ 2.30ರ ಸುಮಾರಿಗೆ ಸುರೇಶ್ ಆ ಹಣವನ್ನು ಡ್ರಾ ಮಾಡಿಕೊಂಡು ಬೈಕ್ನಲ್ಲಿ ಮನೆಗೆ ಹೊರಟಿದ್ದರು. ಈ ವೇಳೆ ಬೈಕ್ನಲ್ಲಿ ಹಿಂಬಾಲಿಸಿ ಬಂದ ದುಷ್ಕರ್ಮಿಗಳಿಬ್ಬರು, ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.