ಬೆಂಗಳೂರು: ದುಬೈಗೆ ಕೆಲಸಕ್ಕೆಂದು ಹೋಗಿದ್ದ ಬೆಂಗಳೂರಿನ ದೀಪಕ್ ಎಂಬುವರು ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದು, ಅವರನ್ನು ಹುಡುಕಿಕೊಡುವಂತೆ ಅವರ ತಾಯಿ ಮಂಜುಳಾ ಹೆಚ್ಚುವರಿ ಪೊಲೀಸ್ ಕಮಿಷನರ್ ಬಿ.ಕೆ.ಸಿಂಗ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ನಗರದ ಪಟೇಗಾರಪಾಳ್ಯದ ನಿವಾಸಿಯಾದ ದೀಪಕ್, ಎಂಬಿಎ ಪದವೀಧರ. 6 ವರ್ಷಗಳ ಹಿಂದೆ ದುಬೈಗೆ ಹೋಗಿದ್ದ ಅವರು ಮಸ್ಕತ್ನಲ್ಲಿರುವ ‘ಮಾರ್ಸ್ ಹೈಪರ್ ಟೆಕ್ಸ್ಟ್’ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು.
ಡಿ. 10ರಂದು ತಾಯಿಗೆ ಕೊನೆಯದಾಗಿ ಕರೆ ಮಾಡಿದ್ದ ದೀಪಕ್, ಆ ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಅದರಿಂದ ನೊಂದ ತಾಯಿ, ಪ್ರಧಾನಿ ಹಾಗೂ ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದಾರೆ. ಇದುವರೆಗೂ ಮಗ ಸಿಗದಿದ್ದರಿಂದ ನಗರದ ಪೊಲೀಸರ ಸಹಾಯ ಕೋರಿದ್ದಾರೆ.
‘ಪೋಲಿಯೊಗೆ ತುತ್ತಾಗಿರುವ ಮಗಳಿದ್ದಾಳೆ. ಮಗ ದೀಪಕ್, ಪ್ರತಿ ತಿಂಗಳು ₹50 ಸಾವಿರ ಕಳುಹಿಸು ತ್ತಿದ್ದ. ಈಗ ಆತ ಸಂಪರ್ಕಕ್ಕೆ ಸಿಗುತ್ತಿಲ್ಲ. ತುಂಬಾ ಭಯವಾಗುತ್ತಿದ್ದು, ಮಗನನ್ನು ಹುಡುಕಿಕೊಡಿ’ ಎಂದು ಮಂಜುಳಾ ಮನವಿಯಲ್ಲಿ ತಿಳಿಸಿದ್ದಾರೆ.
‘ದೀಪಕ್ನನ್ನು ಹುಡುಕಿಕೊಡಲು ಪ್ರಯತ್ನಿಸುತ್ತೇವೆ’ ಎಂದು ಬಿ.ಕೆ.ಸಿಂಗ್ ಭರವಸೆ ನೀಡಿದ್ದಾರೆ.