ಹುಬ್ಬಳ್ಳಿ: ಸಂವಿಧಾನ ಜಾಗೃತಿ ವೇದಿಕೆ ನಗರದ ಮೆಟ್ರೊ ಪೊಲೀಸ್ ಹೋಟೆಲ್ನಲ್ಲಿ ಫೆ22ರಂದು ಸಂಜೆ 7.15ಕ್ಕೆ ‘ಬನ್ನಿ ಸಂವಿಧಾನ ಅರಿಯೋಣ’ ವಿಷಯ ಕುರಿತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಂಟಿ ಸಂಚಾಲಕ ಗುರುನಾಥ ಉಳ್ಳಿಕಾಶಿ, ಸಂವಿಧಾನದ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ವೇದಿಕೆಯ ಉದ್ದೇಶವಾಗಿದೆ. 22ರ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಕೀಲ ಕೆ. ಪ್ರಕಾಶ, ಹುಬ್ಬಳ್ಳಿಯ ವಕೀಲ ಎಸ್.ಎಸ್. ಖತೀಬ ಮಾತನಾಡುವರು ಎಂದರು.
ಸಂಚಾಲಕ ಅಬ್ದುಲ್ ಕರೀಂ ಮಾತನಾಡಿ, ಅಲ್ಪಸಂಖ್ಯಾತರು ಸಂವಿಧಾನದ ವಿರೋಧಿಗಳು ಎಂಬ ಭಾವನೆಯನ್ನು ಮೂಡಿಸಲಾಗುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಇದು ರಾಜಕೀಯ ಸಂಘಟನೆ ಅಲ್ಲ. ಜನರಿಗೆ ಮಾಹಿತಿ ನೀಡುವುದು ನಮ್ಮ ಉದ್ದೇಶ. ಜಾಗೃತಿ ಹೊಂದಿದವರು ಯಾವುದು ಸಂವಿಧಾನ ವಿರೋಧಿ ಎಂಬುದನ್ನು ತಾವೇ ನಿರ್ಧಿರಿಸುವರು ಎಂದರು. ಸಂವಿಧಾನದ ಪ್ರಸ್ತಾವನೆಯನ್ನು ಅರಿತರೆ ಸಾಕು ಸಂವಿಧಾನ ಏನೆಂದು ತಿಳಿಯುತ್ತದೆ ಎಂದು ಹೇಳಿದರು.
ಪ್ರತಿ ವಾರ ನಗರದ ವಿವಿಧ ಭಾಗಗಳಲ್ಲಿ ಚರ್ಚಾಕೂಟಗಳನ್ನು ಸಹ ಆಯೋಜಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಕೆಎಲ್ಇ ಮುಖ್ಯಸ್ಥರ ವಿರುದ್ಧ ಪ್ರಕರಣ ದಾಖಲಿಸಿ: ಹುಬ್ಬಳ್ಳಿಯ ಕೆಎಲ್ಇ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪಾಕ್ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಲ್ಇ ಸಂಸ್ಥೆಯ ಮುಖ್ಯಸ್ಥರು ಹಾಗೂ ಸಿಆರ್ಪಿಸಿ 169ರ ಅನ್ವಯ ಬಂಧಿತ ಆರೋಪಿಗಳನ್ನು ಬಿಡುಗಡೆ ಮಾಡಿದ ಪೊಲೀಸ್ ಅಧಿಕಾರಿ ಹಾಗೂ ಬಿಡುಗಡೆ ಮಾಡುವಂತೆ ಒತ್ತಡ ಹೇರಿದವವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಗುರುನಾಥ ಉಳ್ಳಿಕಾಶಿ ಆಗ್ರಹಿಸಿದರು. ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.