ಬೆಂಗಳೂರು: ಮಾರ್ಚ್ 16ರಂದು ನಡೆದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ₹5.60 ಲಕ್ಷ ನಗದು ಜಪ್ತಿ ಮಾಡಿದ್ದಾರೆ.
‘ವಿ.ವಿ.ಪುರದ ಹೇಮಂತ್ ಜೈನ್, ಮುಕೇಶ್ ಕುಮಾರ್ ಹಾಗೂ ಪ್ರವೀಣ್ಕುಮಾರ್ ಬಂಧಿತರು. ಇವರು ಬುಕ್ಕಿಗಳಾಗಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.
‘ವಿ.ವಿ. ಪುರದ ಭುರಗಲ್ ಮಠದ ರಸ್ತೆಯ ಬಿ.ಆರ್. ರಾಮು ಕಟ್ಟಡದ 1ನೇ ಮಹಡಿಯನ್ನು ಆರೋಪಿಗಳು ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮಾಡಿಕೊಂಡಿದ್ದರು. ಮೊಬೈಲ್ ಆ್ಯಪ್ ಮೂಲಕ ಜನರಿಂದ ಹಣ ಕಟ್ಟಿಸಿಕೊಂಡು ಬೆಟ್ಟಿಂಗ್ ಆಡಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಅವರನ್ನು ಬಂಧಿಸಲಾಗಿದೆ’ ಎಂದು ಹೇಳಿದರು.