ದಾಬಸ್ಪೇಟೆ: ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಪಟ್ಟಣದ ಬೈಲಾಂಜನೇಯ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.
ರಥೋತ್ಸವದ ಪ್ರಯುಕ್ತ ದೇಗುಲಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ವಿಶೇಷ ಪೂಜೆಯ ಬಳಿಕ ಆಂಜನೇಯ, ಸೀತಾ, ಲಕ್ಷ್ಮಣರನ್ನು ಒಳಗೊಂಡ ರಾಮ ದೇವರ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ತಂದು ಅಲಂಕೃತಗೊಂಡ ರಥದಲ್ಲಿ ಕೂರಿಸಲಾಯಿತು. ನೆರೆದಿದ್ದ ಭಕ್ತರು ರಥ ಎಳೆದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಥ ತೆರಳಿದಂತೆ ಭಕ್ತರು ಧವನ ಬಾಳೆಹಣ್ಣು ಎಸೆದರು. 20ಕ್ಕೂ ಹೆಚ್ಚು ಅರವಟಿಕೆಗಳಲ್ಲಿ ನೀರು ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆಯೊಂದಿಗೆ ಅನ್ನಸಂತರ್ಪಣೆಯೂ ನಡೆಯಿತು.
ಜಾನಪದ ಕಲಾ ಪ್ರಕಾರಗಳಾದ ವೀರಗಾಸೆ, ಪಟ್ಟದ ಕುಣಿತ, ಚಿಟ್ಟಿಮೇಳ, ತಮಟೆ ವಾದ್ಯ, ಕೋಲಾಟ ಮತ್ತು ನಂದಿಧ್ವಜ ಕುಣಿತ ಸಂಭ್ರಮ ಹೆಚ್ಚಿಸಿದವು.
ರಥೋತ್ಸವದ ಹಿಂದಿನ ದಿನ ಕುಂಬಾರ, ದೇವಾಂಗ, ಜ್ಯೋತಿಪಣ, ಅಗ್ನಿವಂಶ ಕ್ಷತ್ರಿಯ ಸಮುದಾಯದವರಿಂದ ವಿಶೇಷ ಆಚರಣೆಗಳು ನಡೆದವು.