ದಾಬಸ್ಪೇಟೆ: ವಿವಿಧ ಎತ್ತರದ ಬಾಳೆಕಂಬಗಳು, ಬೂದುಗುಂಬಳದ ರಾಶಿಗಳು, ಕನಕಾಂಬರ, ಕಾಕಡ, ಬಟಾನ್ಸ್ ಸೇರಿದಂತೆ ಬಣ್ಣಬಣ್ಣದ ಹೂಗಳು, ಸೇಬು, ಕಿತ್ತಳೆ ಹಣ್ಣುಗಳು, ಮಾವಿನ ಎಲೆ, ಅಲಂಕಾರಿಕ ವಸ್ತುಗಳು, ಅವುಗಳನ್ನು ಕೊಳ್ಳಲು ಜನರ ಭರಾಟೆ ಇದು ದಾಬಸ್ಪೇಟೆಯಲ್ಲಿ ಬುಧವಾರ ಕಂಡು ಬಂದ ದೃಶ್ಯ.
ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ವಿಶೇಷವಾಗಿ ಮನೆಯಲ್ಲಿನ ಆಯುಧಗಳು, ವಾಹನಗಳ ಪೂಜೆ.
ಅಂಗಡಿಗಳು ಮತ್ತು ಕೈಗಾರಿಕೆಗಳ ಪೂಜೆಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಬಂದ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿತು.ಹಣ್ಣುಗಳ ಬೆಲೆ ಕೆಜಿಗೆ ನೂರರ ಗಡಿ ದಾಟಿತ್ತು. ಎತ್ತರಕ್ಕೆ ತಕ್ಕಂತೆ ಬಾಳೆಕಂದುಗಳ ದರ ನಿಗದಿಯಾಗಿತ್ತು.
ಕನಕಾಂಬರದ ದರ ಗಗನಕ್ಕೇರಿದೆ. ಕಾಕಡ, ಸೇವಂತಿಗೆ ಹೂಗಳ ಕೈ ಮೂರು ಸಾವಿರದಷ್ಟಿತ್ತು. ಚಿಕ್ಕ ಹಾರಗಳೇ ನೂರು ರೂಪಾಯಿಗೆ ಒಂದರಂತೆ ಮಾರಾಟವಾದವು. ಎಲ್ಲಾ ವಸ್ತುಗಳ ಬೆಲೆ ಏರಲು ಇಂಧನ ಬೆಲೆ ಏರಿಕೆಯೇ ಕಾರಣ ಎಂದು ವ್ಯಾಪಾರಸ್ಥರು ಹೇಳಿದರು.