ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ | ಹಸ್ತಕ್ಷೇಪ ಮಾಡಲ್ಲ; ನಿರಾಸೆಯಾಗದಂತೆ ನೋಡಿಕೊಳ್ಳಿ: ಸಚಿವ ವಿ.ಸೋಮಣ್ಣ

ದಸರಾ ಉಪ ಸಮಿತಿಗಳ ಸಭೆ
Last Updated 30 ಆಗಸ್ಟ್ 2019, 15:40 IST
ಅಕ್ಷರ ಗಾತ್ರ

ಮೈಸೂರು: ‘ಉಪ ಸಮಿತಿಗಳ ಕಾರ್ಯ ಚಟುವಟಿಕೆಯಲ್ಲಿ ಹಸ್ತಕ್ಷೇಪ ನಡೆಸಲ್ಲ. ಆದರೆ ಜನರಿಗೆ ನಿರಾಸೆಯಾಗದಂತೆ ದಸರಾ ನಡೆಸುವುದು ನಿಮ್ಮಗಳ ಜವಾಬ್ದಾರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಮುಡಾ ಸಭಾಂಗಣದಲ್ಲಿ ಶುಕ್ರವಾರ ದಸರಾ ಉಪ ಸಮಿತಿಗಳ ಸದಸ್ಯರ ಸಭೆ ನಡೆಸಿದ ಸಚಿವರು, ‘ಅನಾವಶ್ಯಕ ಯೋಜನೆ ರೂಪಿಸಬೇಡಿ. ಸಂಪ್ರದಾಯ, ಪರಂಪರೆಗೆ ಧಕ್ಕೆಯಾಗದಂತೆ ದಸರಾ ಚಟುವಟಿಕೆ ನಡೆಸಿ’ ಎಂದು ಸಲಹೆ ನೀಡಿದರು.

‘ದಸರಾ ಆಚರಣೆ ಯಾವುದೇ ಒಂದು ಇಲಾಖೆಗೆ ಸೀಮಿತವಾದುದಲ್ಲ. ಯಾರನ್ನೋ ಮೆಚ್ಚಿಸಲು ಮುಂದಾಗಬೇಡಿ. ನಿಮ್ಮ ಆತ್ಮ ತೃಪ್ತಿಗೆ ಕೆಲಸ ಮಾಡಿ. ಇಂತಹ ಅವಕಾಶ ಎಲ್ಲರಿಗೂ ಸಿಗಲ್ಲ. ಪುಷ್ಪಾಲಂಕಾರ, ವಿದ್ಯುತ್‌ ದೀಪಾಲಂಕಾರ, ವೃತ್ತಗಳ ಅಲಂಕಾರ ವಿಭಿನ್ನವಾಗಿರಲಿ. ರೈತ ದಸರಾ, ಮಹಿಳಾ ದಸರಾ, ಯುವ ದಸರಾ ಜನರನ್ನು ಆಕರ್ಷಿಸುವಂತಿರಲಿ’ ಎಂದು ಸಂಬಂಧಿಸಿದ ಸಮಿತಿ ಸದಸ್ಯರಿಗೆ ಸೂಚಿಸಿದರು.

‘ಈ ಹಿಂದಿನ ಮೂರು ವರ್ಷದಲ್ಲಿ ನಡೆದ ಲೋಪಗಳನ್ನು ಸರಿಪಡಿಸಿಕೊಳ್ಳಿ. ಮೈಸೂರು ದಸರಾಗೆ ತನ್ನದೇ ಐತಿಹಾಸಿಕ ಮಹತ್ವವಿದೆ. ಈ ಉತ್ಸವದಲ್ಲಿ ಭಾಗಿಯಾಗುವುದು ಪ್ರತಿಯೊಬ್ಬರಿಗೂ ಗೌರವದ ಸಂಕೇತ. ಇಲ್ಲಿ ನಗದು ಬಹುಮಾನ ಮುಖ್ಯವಲ್ಲ. ರಾಜ್ಯಕ್ಕೆ ಪೂರಕವಾಗುವಂತಹ ಕಾರ್ಯಕ್ರಮಗಳನ್ನೇ ಹಮ್ಮಿಕೊಳ್ಳಿ’ ಎಂದು ಸೋಮಣ್ಣ ಕಿವಿಮಾತು ಹೇಳಿದರು.

ಅಪಚಾರ ಬೇಡ: ‘ಪಿಕ್‌ಪಾಕೆಟ್‌ ಕಳ್ಳರು, ಬೀದಿ ಕಾಮಣ್ಣರು, ಮಜಾ ಮಾಡಲಿಕ್ಕಾಗಿಯೇ ದಸರಾ ಉತ್ಸವದಲ್ಲಿ ಭಾಗಿಯಾಗುವವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರುಗಿಸಿ. ಸಂಯಮ ಕಳೆದುಕೊಳ್ಳಬೇಡಿ. ಇಲಾಖೆಯಿಂದ ಸಿಬ್ಬಂದಿಗೆ ನೀತಿ ಪಾಠ ಬೋಧಿಸಿ. ಸಿಬ್ಬಂದಿಯನ್ನು ಪ್ರೀತಿಯಿಂದ ಕಾಣಿ. ಹೊತ್ತೊತ್ತಿಗೆ ಊಟ–ಉಪಾಹಾರ ಕೊಡಿ. ಎಲ್ಲಿಯೂ ಒಂದಿನಿತು ಅಪಚಾರವಾಗದಂತೆ ಕೆಲಸ ಮಾಡುವುದು ನಿಮ್ಮ ಜವಾಬ್ದಾರಿ’ ಎಂದು ಸಚಿವ ಸೋಮಣ್ಣ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣಗೆ ಸೂಚಿಸಿದರು.

ಸಭೆಯಲ್ಲಿ ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT