ಬೆಂಗಳೂರು: ವಿಶೇಷ ಪೂಜೆ ನೆಪದಲ್ಲಿ ಮೂವರಿಂದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ನಕಲಿ ಸ್ವಾಮೀಜಿ ಅವಿನಾಶ್ ಸುರೇಶ್ ಕಾನ್ವಿಲ್ಕರ್ ಎಂಬುವರ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಭಾನುವಾರ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಗಿರಿನಗರ 2ನೇ ಮುಖ್ಯರಸ್ತೆಯ ನಿವಾಸಿ ಮಹೇಶ್, ಚನ್ನಮ್ಮನ ಅಚ್ಚುಕಟ್ಟು ಪ್ರದೇಶದ ನಿವಾಸಿ ಮಂಜುಳಾ ಹಾಗೂ ಅವರ ಪಕ್ಕದ ಮನೆಯ ಮಹಿಳೆಗೆ ಅವಿನಾಶ್ ವಂಚಿಸಿದ್ದ. ಆ ಸಂಬಂಧ ಗಿರಿನಗರ ಹಾಗೂ ಚನ್ನಮ್ಮನ ಅಚ್ಚುಕಟ್ಟು ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಅದೇ ಆರೋಪಿ, ಸುಬ್ರಹ್ಮಣ್ಯಪುರದ ನಿವಾಸಿ ಕೆ.ಶ್ರೀನಿವಾಸ್ ಎಂಬುವರಿಂದಲೂ ಚಿನ್ನಾಭರಣ ಹಾಗೂ ₹50 ಲಕ್ಷ ನಗದು ಪಡೆದು ವಂಚಿಸಿದ್ದಾನೆ. ಶ್ರೀನಿವಾಸ್ ಅವರು ಸುಬ್ರಹ್ಮಣ್ಯಪುರ ಠಾಣೆಗೆ ದೂರು ನೀಡಿದ್ದಾರೆ.
‘ನನಗೆ ಹಾಗೂ ತಂದೆ–ತಾಯಿಗೆ ಗಂಡಾಂತರವಿರುವುದಾಗಿ ಹೇಳಿದ್ದ ಆರೋಪಿ, ಪೂಜೆ ಮಾಡುವ ನೆಪದಲ್ಲಿ ಚಿನ್ನಾಭರಣ ಹಾಗೂ ನಗದು ತೆಗೆದುಕೊಂಡು ಹೋಗಿದ್ದಾನೆ. ಆತನ ಮೊಬೈಲ್ ನಂಬರ್ ಸಹ ಸ್ವಿಚ್ ಆಫ್ ಆಗಿದೆ. ನಮ್ಮ ಸಂಬಂಧಿಕರಿಗೂ ಆತ ಇದೇ ರೀತಿಯಲ್ಲಿ ವಂಚಿಸಿದ್ದಾನೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.