ಬೆಂಗಳೂರು: ಖರ್ಜೂರದ ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಮಾರಾಟ ಮಾಡುತ್ತಿದ್ದ ಚಾಲಾಕಿಯೊಬ್ಬ ಸದ್ದುಗುಂಟೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಆಸ್ಟಿನ್ಟೌನ್ ಸಮೀಪದ ವಿಕ್ಟೋರಿಯಾ ಲೇಔಟ್ನ ಆರ್.ವಿ.ಓಂಪ್ರಕಾಶ್ ಬಂಧಿತ ಆರೋಪಿ. ಈತ ಬಿಟಿಎಂ ಲೇಔಟ್ 13ನೇ ಮುಖ್ಯರಸ್ತೆಯಲ್ಲಿ ದಂಧೆ ನಡೆಸುತ್ತಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ದಾಳಿ ನಡೆಸಿ ವಶಕ್ಕೆ ಪಡೆಯಲಾಯಿತು. ಆರೋಪಿಯಿಂದ ₹ 3.5 ಲಕ್ಷ ಮೌಲ್ಯದ 20 ಎಲ್ಎಸ್ಡಿ ಕಾಗದ ಹಾಗೂ 2 ಕೆ.ಜಿ.ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೊದಲು ಮಾದಕ ವ್ಯಸನಿ ಆಗಿದ್ದ ಓಂಪ್ರಕಾಶ್, ಡ್ರಗ್ಸ್ ಖರೀದಿಗೆ ಹಣ ಸಿಗದಿದ್ದಾಗ ಪೆಡ್ಲರ್ (ಪೂರೈಕೆದಾರ) ಆಗಿ ಬದಲಾದ. ಹೊಸಕೋಟೆಯ ಮಂಜುನಾಥ್ ಎಂಬಾತನಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಈತ, ಅದನ್ನು ‘ಲಯನ್ ಡೇಟ್ಸ್’ ಖರ್ಜೂರದ ಪೊಟ್ಟಣದಲ್ಲಿ ತುಂಬಿ ಪರಿಚಯಸ್ಥ ಗ್ರಾಹಕರಿಗಷ್ಟೇ ಪೊರೈಸುತ್ತಿದ್ದ.
‘ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾಫ್ಟ್ವೇರ್ ಉದ್ಯೋಗಿಗಳು ನನ್ನ ಸಂಪರ್ಕ ಜಾಲದಲ್ಲಿದ್ದರು. ಅದರಲ್ಲೂ ಡ್ರಗ್ಸ್ ಕೇಳಿಕೊಂಡು ಹುಡುಗಿಯರಿಂದಲೇ ಹೆಚ್ಚು ಕರೆಗಳು ಬರುತ್ತಿದ್ದವು. ಅಪರಿಚಿತರು ಸಂಪರ್ಕಿಸಿದರೆ, ರಾಂಗ್ ನಂಬರ್ ಎಂದು ಹೇಳಿ ಕರೆ ಸ್ಥಗಿತಗೊಳಿಸುತ್ತಿದ್ದೆ’ ಎಂದು ಆರೋಪಿ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.