ಬೆಂಗಳೂರು: ‘ಸ್ವಚ್ಛ ಭಾರತ ಅಭಿಯಾನದ ಆಶಯ ನಗರದಲ್ಲಿ ಕಾಣದಂತಾಗಿದೆ. ಹೈಕೋರ್ಟ್ ಆದೇಶದ ನಂತರ, ಘನ ತ್ಯಾಜ್ಯ ನಿರ್ವಹಣೆ ಕೆಲಸ ನಗರದ ಕೆಲವೆಡೆ ನಡೆಯುತ್ತಿದ್ದರೂ, ಪದ್ಮನಾಭನಗರದ ಬೃಂದಾವನ ಲೇಔಟ್ನಲ್ಲಿ ಈ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ’ ಎಂದು ನಿವಾಸಿಗಳು ದೂರುತ್ತಾರೆ.
‘ಕಸ ಸಂಗ್ರಹದ ಲಾರಿಗಳು ಬೃಂದಾವನ ಲೇಔಟ್ನಲ್ಲಿ ಓಡಾಡುತ್ತವೆ. ಆದರೆ, ಇಲ್ಲಿನ ಸಿಬ್ಬಂದಿ ಕಸ ಸ್ವೀಕರಿಸುವುದೇ ಇಲ್ಲ. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಓಗೊಟ್ಟಿಲ್ಲ’ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.
‘ಬಿಬಿಎಂಪಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ’ ಎಂದೂ ಅವರು ದೂರುತ್ತಾರೆ.
‘ನಾಗರಿಕರ ಮೇಲೆ ತೆರಿಗೆ ವಿಧಿಸುವ ಬಿಬಿಎಂಪಿ, ಈ ಪೈಕಿ ಹೆಚ್ಚು ಸುಂಕವನ್ನು ಘನ ತ್ಯಾಜ್ಯ ವಿಲೇವಾರಿಗೆ ಎಂದೇ ತೆಗೆದುಕೊಳ್ಳುತ್ತದೆ. ಆದರೆ, ಕಸ ವಿಲೇವಾರಿ ಮಾತ್ರ ಸಮರ್ಪಕವಾಗಿ ನಡೆಯುತ್ತಿಲ್ಲ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.