ಬೆಂಗಳೂರು: ಹೂಡಿ ರೈಲು ನಿಲ್ದಾಣದಲ್ಲಿ ಎರಡು ಪ್ಲಾಟ್ಫಾರಂ,ನೂತನ ವಿಶ್ರಾಂತಿ ತಾಣ ಹಾಗೂ ಎರಡು ಪಾದಚಾರಿ ಮೇಲ್ಸೇತುವೆಗಳನ್ನು ಸಂಸದ ಪಿ.ಸಿ.ಮೋಹನ್ ಹಾಗೂ ಶಾಸಕ ಅರವಿಂದ ಲಿಂಬಾವಳಿ ಲೋಕಾರ್ಪಣೆಗೊಳಿಸಿದರು.
ಮಾಹಿತಿ ತಂತ್ರಜ್ಞಾನ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಹೂಡಿ ಪರಿಸರದಲ್ಲಿ ವಾಹನ ದಟ್ಟಣೆ, ವಾಯುಮಾಲಿನ್ಯ ಸಮಸ್ಯೆಯಿಂದ ಜನ ಹೈರಾಣಾಗಿದ್ದರು. ಸ್ಥಳೀಯರ ಒತ್ತಾಯದ ಮೇರೆಗೆ ಪಿ.ಸಿ.ಮೋಹನ್ ಅವರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ನಿಲ್ದಾಣದ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡಿದ್ದರು.
ಕಾರ್ಮೆಲರಾಮ್ ರೈಲು ನಿಲ್ದಾಣದ ಬಳಿ ಕಿರಿದಾದ ಲೆವೆಲ್ ಕ್ರಾಸಿಂಗ್ನಿಂದಾಗಿ ಭಾರಿ ವಾಹನ ದಟ್ಟಣೆ ಉಂಟಾಗುತ್ತಿತ್ತು. ಈ ಸಮಸ್ಯೆ ನಿವಾರಣೆ ಸಲುವಾಗಿ ಲೆವೆಲ್ ಕ್ರಾಸಿಂಗ್ ವಿಸ್ತರಿಸಲಾಗಿದ್ದು ಅದನ್ನೂ ಸಂಸದರು ಲೋಕಾರ್ಪಣೆಗೊಳಿಸಿದರು.
‘ವಾಹನದಟ್ಟಣೆ ಸಮಸ್ಯೆ ನೀಗಿಸಲು ನಗರದಲ್ಲಿ ಉಪನಗರ ರೈಲು ಯೋಜನೆ ತ್ವರಿತವಾಗಿ ಅನುಷ್ಠಾನಗೊಳ್ಳಬೇಕು. ಇದಕ್ಕೆ ಸಹಕರಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಒತ್ತಾಯಿಸುತ್ತೇನೆ’ ಎಂದು ಪಿ.ಸಿ.ಮೋಹನ್ ಹೇಳಿದರು.