ಹುಬ್ಬಳ್ಳಿ: ಇಲ್ಲಿನ ಉಪ ಕಾರಾಗೃಹದಲ್ಲಿ ನಡೆದಿದ್ದ ದೊಂಬಿ ಪ್ರಕರಣದ ಅಪರಾಧಿಗಳಿಗೆ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ ಉರುಫ್ ಸೈಂಟಿಸ್ಟ್ ಮಂಜ್ಯನಿಗೆ 12 ವರ್ಷ, ಉಳಿದ ಆರೋಪಿಗಳಾದ ದುರ್ಗಪ್ಪ ಬಿಜವಾಡ, ರಜನಿ ಬಿಜವಾಡ, ಸುಬೋದ್ ಗಾಯಕ್ವಾಡ್, ರಾಜೇಂದ್ರ ಕಲಾಲ್, ಶಿವರಾಜ್ ಗೌರಿ, ಅತೀಶ ಕಾಂಬ್ಳೆ, ಸಲೀಂ ತಾಳಿಕೋಟೆ ಅವರಿಗೆ ಎರಡು ವರ್ಷ 9 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
ದುರ್ಗಪ್ಪ ಬಿಜವಾಡ ಮತ್ತು ರಜನಿ ಬಿಜವಾಡ ಅವರನ್ನು ಕಲಬುರ್ಗಿ ಕಾರಾಗೃಹಕ್ಕೆ ಸ್ಥಳಾಂತರ ಮಾಡುವುದನ್ನು ವಿರೋಧಿಸಿ 2011 ಫೆಬ್ರುವರಿ 18ರಂದು ಸೈಂಟಿಸ್ಟ್ ಮಂಜ ಹಾಗೂ ಇತರರು ಗಲಾಟೆ ಮಾಡಿ ಹಲ್ಲೆ ನಡೆಸಿದ್ದರು. 27 ಮಂದಿ ಕೈದಿಗಳು ಹಾಗೂ 24 ಪೊಲೀಸ್ ಹಾಗೂ ಕಾರಾಗೃಹ ಸಿಬ್ಬಂದಿ ಗಾಯಗೊಂಡಿದ್ದರು.
ಪಬ್ಲಿಕ್ ಪ್ರಾಸಿಕ್ಯೂಟರ್ ಬಾಂದೇಕರ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ನ್ಯಾಯಾಧೀಶರಾದ ಕೆ.ಎಸ್. ಗಂಗಣ್ಣವರ ಮೇಲಿನ ಆದೇಶ ನೀಡಿದ್ದಾರೆ.