ಬೆಂಗಳೂರು: ‘ರಾಜ್ಯದ ಬಿಜೆಪಿ ಸಂಸದರು, ಶಾಸಕರು ಬಾಯಿಗೆ ಬೀಗ ಹಾಕಿಕೊಂಡಿರುವ ಹೊತ್ತಿನಲ್ಲಿ ಬಸನಗೌಡ ಪಾಟೀಲ ಯತ್ನಾಳ ಮಾತ್ರ ಕೇಂದ್ರ ಧೋರಣೆ ವಿರುದ್ಧ ಧ್ವನಿ ಎತ್ತಿದ್ದು, ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ’ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ತಿಳಿಸಿದ್ದಾರೆ.
‘ಕರ್ನಾಟಕದ ಜನರು ಬಿಜೆಪಿಯ 25 ಸಂಸದರನ್ನು ಆಯ್ಕೆ ಮಾಡಿದ್ದಾರೆ. 105 ಶಾಸಕರು ಇದ್ದಾರೆ. ಉತ್ತರ–ದಕ್ಷಿಣವೆನ್ನದೇ ಉಕ್ಕಿ ಹರಿದ ಪ್ರವಾಹದಿಂದಾಗಿ ಜನರು ಸೂರು ಕಳೆದುಕೊಂಡು ಎರಡು ತಿಂಗಳಾಯಿತು. ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಕೇಂದ್ರದ ಕರ್ನಾಟಕ ವಿರೋಧಿ ಧೋರಣೆ ಬಗ್ಗೆ ಬಿಜೆಪಿಯವರಾದ ಯತ್ನಾಳ ಮಾತ್ರ ಧ್ವನಿ ಎತ್ತಿದ್ದಾರೆ’ ಎಂದು ರಮೇಶ್ ಬಾಬು ಶ್ಲಾಘಿಸಿದ್ದಾರೆ.
‘ರಾಜ್ಯ ಬಿಜೆಪಿಯಲ್ಲಿ ಎರಡು ಶಕ್ತಿಗಳು ನಿರ್ಮಾಣವಾಗಿರುವುದರಿಂದಾಗಿ ಕರ್ನಾಟಕ ರಾಜ್ಯ ಬಲಿಪಶು ಆಗುತ್ತಿದೆ ಎನ್ನುವ ಸತ್ಯವನ್ನು ಯತ್ನಾಳ ಹೊರಹಾಕಿರುವುದಕ್ಕೆ ಧನ್ಯವಾದಗಳು’ ಎಂದು ಅವರು ತಿಳಿಸಿದ್ದಾರೆ.