ಬೆಂಗಳೂರು: ‘ಸಮಾಜದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸುವುದಕ್ಕಿಂತ ಸುತ್ತಿ ಸುಳಿದು ನೋಡದಂತೆ ಅಂಧನಾಗುವುದೇ ಲೇಸು’ ಎಂದು ಸಾಹಿತಿ ಕೆ. ಮರುಳಸಿದ್ಧಪ್ಪ ಅಭಿಪ್ರಾಯಪಟ್ಟರು.
ಗಾನಯೋಗಿ ಪುಟ್ಟರಾಜ ಗವಾಯಿ ಮತ್ತು ಹೆಲನ್ ಕೆಲ್ಲರ್ ಸ್ಮರಣಾರ್ಥ ಕದಂಬ ಅಂಗವಿಕಲರ ಸಾಂಸ್ಕೃತಿಕ ಕಲ್ಯಾಣ ಸಂಸ್ಥೆ ಹಾಗೂ ಅಂಧರ ವಿಮೋಚನಾ ವೇದಿಕೆ ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಅಸಮಾನತೆ ಮಾನವ ನಿರ್ಮಿತ ತಾರತಮ್ಯವಾದರೆ, ಅಂಗವೈಕಲ್ಯ ನಿಸರ್ಗ ನಿರ್ಮಿತ ತಾರತಮ್ಯ. ವಿಶೇಷ ಚೇತನರನ್ನು ಗೌರವದಿಂದ ಕಾಣುವುದು ನಾಗರಿಕ ಸಮಾಜದ ಕರ್ತವ್ಯ’ ಎಂದರು.
ಹಿರಿಯ ಸಂಗೀತ ಕಲಾವಿದೆ ಡಾ. ಶ್ಯಾಮಲಾ ಜಿ. ಭಾವೆ ಅವರಿಗೆ ‘ಸಂಗೀತರತ್ನ’ ಹಾಗೂ ನೇತ್ರತಜ್ಞ ಡಾ. ಕೆ. ಭುಜಂಗ ಶೆಟ್ಟಿ ಅವರಿಗೆ ‘ಸೇವಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ಉಪಸ್ಥಿತರಿದ್ದರು.