ಕುರುಡು ಸೊಣ್ಣೆನಹಳ್ಳಿ ಗ್ರಾಮ: ತೀವ್ರಗೊಂಡ ಕಸದ ಸಮಸ್ಯೆ

ಮಹದೇವಪುರ: ಕುರುಡು ಸೊಣ್ಣೆನಹಳ್ಳಿ ಗ್ರಾಮದಲ್ಲಿ ಕಸದ ಸಮಸ್ಯೆ ತೀವ್ರಗೊಂಡಿದ್ದು, ಗ್ರಾಮದ ಮುಖ್ಯ ರಸ್ತೆ ಬದಿಯಲ್ಲಿ ನೂರಾರು ಮೀಟರ್ಗಳಷ್ಟು ದೂರದವರೆಗೆ ಎಲ್ಲೆಂದರಲ್ಲಿ ಕಸ ರಾಶಿಯಾಗಿ ಬಿದ್ದಿದೆ.
‘ಕಿತ್ತಗನೂರು ಗ್ರಾಮ ಪಂಚಾಯಿತಿಯಿಂದ ಕಳೆದ ಒಂದು ತಿಂಗಳಿಂದಲೂ ಕಸ ವಿಲೇವಾರಿ ಮಾಡುತ್ತಿಲ್ಲ. ಪಂಚಾಯಿತಿ ಕಾರ್ಮಿಕರು ದಿನವೂ ಕಸವನ್ನು ಸಂಗ್ರಹಿಸಬೇಕು. ಆದರೆ, ತಿಂಗಳಾದರೂ ಯಾವ ಕಾರ್ಮಿಕರು ಊರಿನತ್ತ ಮುಖ ಮಾಡಿಲ್ಲ’ ಎಂದು ಗ್ರಾಮಸ್ಥೆ ರಾಧಮ್ಮ ದೂರಿದರು.
‘ಅಪರೂಪಕ್ಕೊಮ್ಮೆ ಬರುವ ಕಾರ್ಮಿಕರು ರಸ್ತೆಯ ಬದಿಯಲ್ಲಿ ಬಿದ್ದಿರುವ ಕಸದಲ್ಲಿ ಸ್ವಲ್ಪ ಮಾತ್ರ ಆಟೋದಲ್ಲಿ ತುಂಬಿಕೊಂಡು ಹೋಗುತ್ತಾರೆ. ಹೆಚ್ಚುವರಿಯಾಗಿ ಬಿದ್ದಿರುವ ಕಸಕ್ಕೆ ಬೆಂಕಿ ಹಚ್ಚುತ್ತಾರೆ. ಹೊಗೆಯಿಂದ ಮಾಲಿನ್ಯ ಉಂಟಾಗಿ ನಿವಾಸಿಗಳು ಮೂಗು ಮುಚ್ಚಿಕೊಂಡು ಬದುಕುವ ಸ್ಥಿತಿ ಇದೆ’ ಎಂದು ಅವರು ಅಳಲು ತೋಡಿಕೊಂಡರು.
ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ಅನೇಕ ಬಾರಿ ದೂರು ನೀಡಲಾಗಿದೆ. ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ಮುನಿರಾಜು ಆರೋಪಿಸಿದರು. ವಾರಕ್ಕೆ ಒಮ್ಮೆಯಾದರೂ ಊರಿನಲ್ಲಿ ಕಸ ತೆಗೆಯಲು ಪಂಚಾಯಿತಿ ವತಿಯಿಂದ ಕ್ರಮ ಕೈಗೊಂಡರೆ ಊರು
ಸ್ವಚ್ಛವಾಗಲಿದೆ. ಹಾಗಾಗಿ ಪಂಚಾಯಿತಿ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
‘ಇದೇ ಗ್ರಾಮದಲ್ಲಿ ಶನಿವಾರ ಗ್ರಾಮಸಭೆ ಇತ್ತು. ಕಸದ ಸಮಸ್ಯೆ ಬಗ್ಗೆ ಯಾರೂ ಗಮನಕ್ಕೆ ತಂದಿಲ್ಲ. ಕಸ ಇದ್ದರೆ ತೆಗೆಸಲು ಕ್ರಮ
ಕೈಗೊಳ್ಳಲಾಗುವುದು’ ಎಂದು ಪಿಡಿಓ ರಾಜಶೇಖರ ‘ಪ್ರಜಾವಾಣಿ’ಗೆ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.