ಹುಬ್ಬಳ್ಳಿ: ‘ಕೃಷ್ಣ ನದಿಗೆ ಕೊಯ್ನಾ ಜಲಾಶಯದಿಂದ ನೀರು ಬಿಡುವಂತೆ ಮನವಿ ಮಾಡಿದರೂ ಮಹಾರಾಷ್ಟ್ರ ಮುಖ್ಯಮಂತ್ರಿ ಇನ್ನೂ ನೀರು ಬಿಟ್ಟಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿದ ಅವರು, ‘ನಮ್ಮ ಜನರು ಸಂಕಷ್ಟದಲ್ಲಿರುವುದರಿಂದ ತುರ್ತಾಗಿ ನೀರು ಬೇಕಾಗಿದೆ. ನಮ್ಮ ಮುಖ್ಯಮಂತ್ರಿ ಮೂಲಕ ಅವರಿಗೆ ಇನ್ನೊಮ್ಮೆ ಮನವಿ ಮಾಡಲಾಗುವುದು. ನೀರು ಹರಿಸುವ ಬಗ್ಗೆ ಕಟ್ಟುನಿಟ್ಟಿನ ಆದೇಶ ಮಾಡಿ ಎಂದು ಅವರಿಗೆ ಕೇಳಿಕೊಳ್ಳಲಾಗುವುದು’ ಎಂದರು.
‘ಅಕ್ಕಪಕ್ಕದ ರಾಜ್ಯಗಳು ಸಹಭಾಳ್ವೆಯಿಂದ ಇರಬೇಕು, ಜನರು ಸಂಕಷ್ಟದಲ್ಲಿದ್ದು ನೀರು ಬಿಡಬೇಕು. ನೀರಿನಲ್ಲಿ ರಾಜಕಾರಣ ಮಾಡಬಾರದು, ಹೃದಯದ ರಾಜಕಾರಣ ಮಾಡಬೇಕು’ ಎಂದು ಅವರು ಹೇಳಿದರು.