ತುಮಕೂರು: ಕೆಎಸ್ಆರ್ಟಿಸಿ ಸಿಬ್ಬಂದಿಯೊಬ್ಬರ ವರ್ಗಾವಣೆಗೆ ಸಂಬಂಧಿಸಿದಂತೆ ತುರುವೇಕೆರೆ ಶಾಸಕ ಎ.ಎಸ್.ಜಯರಾಮ್, ಕೆಎಸ್ಆರ್ಟಿಸಿ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ (ಡಿ.ಸಿ) ಗಜೇಂದ್ರ ಕುಮಾರ್ ಅವರಿಗೆ ಸಾರ್ವಜನಿಕವಾಗಿ ಆವಾಜ್ ಹಾಕಿದ್ದಾರೆ. ಈ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.
ತುರುವೇಕೆರೆಯಲ್ಲಿ ಕೆಲಸ ನಿರ್ವಹಿಸಿ ಬೇರೆಡೆ ವರ್ಗಾವಣೆ ಆಗಿದ್ದ ಸಿಬ್ಬಂದಿ ಒಬ್ಬರನ್ನು ತುರುವೇಕೆರೆಗೆ ಮರು ನಿಯೋಜಿಸುವಂತೆ ಶಾಸಕರು ವಿಭಾಗೀಯ ನಿಯಂತ್ರಣಾಧಿಕಾರಿಗೆ ಪತ್ರ ನೀಡಿದ್ದರು. ಆದರೆ ಇದನ್ನು ನಿಯಂತ್ರಣಾಧಿಕಾರಿ ಮಾನ್ಯ ಮಾಡಿರಲಿಲ್ಲ ಎನ್ನಲಾಗುತ್ತಿದೆ.
‘ಆತನ ಅಪ್ಪನಿಗೆ ಪಾರ್ಶ್ವವಾಯು ಆಗಿದೆ. ಎಂಟು ದಿನ ರಜೆ ಹಾಕಿದ್ದಕ್ಕೆ ಅಮಾನತು ಮಾಡಿದ್ದೀಯ. ನನ್ನ ಪತ್ರ ಕೊಟ್ಟರೆ ಯಾವನು ಎಂಎಲ್ಎ ಎಂದು ಆ ಪತ್ರ ಹರಿದು ಎಸೆಯುತ್ತೀರಾ. ಇಂತಹದ್ದಕ್ಕೆ ಸಿಬ್ಬಂದಿ ವಿಷ ಕುಡಿಯುತ್ತಿರುವುದು. ಮಾಧ್ಯಮದವರು ಇದ್ದಾರೆ. ಮಾತನಾಡ್ರಿ’ ಎಂದು ಶಾಸಕರು ಸಿಡಿಮಿಡಿಗೊಂಡಿದ್ದಾರೆ.
‘ನಾನು ಗೌರವ ಕೊಟ್ಟು ಮಾತನಾಡುತ್ತೇನೆ. ನೀನು ಆ ಗೌರವ ಉಳಿಸಿಕೊಳ್ಳಬೇಕು. ಆತನ ವಿರುದ್ಧ ಒಂದು ಕೇಸ್ ಹಾಕುತ್ತೀಯ ಅಷ್ಟೇ. ಅದು ಏನ್ ಕೇಸ್ ಆಗಲಿ ನಾನು ನೋಡಿಕೊಳ್ಳುವೆ. ನಾನು ಜೈಲಿಗೆ ಹೋದರೂ ಹೋಗುವೆ. ನೀನು ನಮ್ಮವರಿಗೆ ತೊಂದರೆ ಕೊಡಬಾರದು’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.