ರಾಜರಾಜೇಶ್ವರಿನಗರ: ‘ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದ ಮೇಲೆ ಅಧಿಕಾರಿಗಳೇಕೆ ಇರಬೇಕು? ಬಡವರ ಮೇಲೇಕೆ ನಿರ್ಲಕ್ಷ್ಯ? ಇಂಥವರಿಂದ ಸರ್ಕಾರ ಮುಜುಗರ ಅನುಭವಿಸುವಂತಾಗಿದೆ’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.
ಜಿ.ಹೊಸಹಳ್ಳಿಯಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಿರುವ 20 ಮನೆಗಳ ಕೀಲಿಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿ, ‘ಎರಡು ವರ್ಷದ ಹಿಂದೆ ಬಡವರಿಗಾಗಿ 860 ಮನೆಗಳನ್ನು ನಿರ್ಮಿಸಲು ಹಣ ಬಿಡುಗಡೆ ಮಾಡಿ ಮಂಜೂರಾತಿ ದೊರಕಿಸಿಕೊಟ್ಟಿದ್ದರೂ ಮನೆ ನಿರ್ಮಿಸಿಕೊಟ್ಟಿಲ್ಲ. ಬಡವರಿಗೆ ಮನೆ ನಿರ್ಮಿಸಿಕೊಡಲು 2 ವರ್ಷ ಬೇಕೆ?’ ಎಂದು ಗುತ್ತಿಗೆದಾರನನ್ನು ಅವರು ಪ್ರಶ್ನಿಸಿದರು.
ಬಿಬಿಎಂಪಿ ಸದಸ್ಯ ಎಸ್.ವಾಸುದೇವ್, ‘ದೊಡ್ಡಬಿದರಕಲ್ಲು ವ್ಯಾಪ್ತಿಯಲ್ಲಿ 186 ಮನೆಗಳ ಕಾಮಗಾರಿ ಕೈಗೊಳ್ಳಲಾಗಿದೆ. ಕಾರ್ಯಪಾಲಕ ಎಂಜಿನಿಯರ್, ಆಯುಕ್ತರು ಮುಂದೆ ಬಂದು ಕಾಮಗಾರಿ ಪರಿಶೀಲನೆ ಮಾಡಬೇಕು. ಯಾವುದೇ ಇಲಾಖೆಯಾದರೂ ಮುತುವರ್ಜಿ ವಹಿಸಬೇಕು’ ಎಂದರು.
ಪ್ರವಾಸೋದ್ಯಮ ನಿಗಮದ ಮಾಜಿ ನಿರ್ದೇಶಕ ಸತೀಶ್, ತಾಪಂ ಮಾಜಿ ಅಧ್ಯಕ್ಷ ಬಿ.ಅನಿಲ್ಕುಮಾರ್, ಗ್ರಾ. ಪಂ. ಮಾಜಿ ಸದಸ್ಯ ಪೂರ್ವಯ್ಯ ಮಾತನಾಡಿದರು.