ಮದ್ದೂರು: ಪಟ್ಟಣದ ಪತ್ರಿಕಾ ವಿತರಣಾ ಸ್ಥಳಕ್ಕೆ (ಪತ್ರಿಕಾ ಪಾಯಿಂಟ್) ಬಂದಿದ್ದ ಪ್ರಜಾವಾಣಿಯ 750 ಪ್ರತಿ, ಡೆಕ್ಕನ್ ಹೆರಾಲ್ಡ್ನ 250 ಪ್ರತಿಗಳ ಬಂಡಲ್ಗಳನ್ನು ಸೋಮವಾರ ನಸುಕಿನಲ್ಲಿ ಕಿಡಿಗೇಡಿಗಳು ಕಳವು ಮಾಡಿದ್ದಾರೆ.
ಬೆಂಗಳೂರು ಮುದ್ರಣಾಲಯದಿಂದ ಬಂದ ಪತ್ರಿಕೆ ಬಂಡಲ್ಗಳನ್ನು ಭಾನುವಾರ ತಡರಾತ್ರಿ 2.30ರ ಸಮಯದಲ್ಲಿ ಮದ್ದೂರು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಇರಿಸಲಾಗಿತ್ತು. ನಸುಕಿನ 3 ಗಂಟೆಯಲ್ಲಿ ಮದ್ದೂರು ಏಜೆಂಟರಾದ ಎಂ.ಆರ್.ಚಕ್ರಪಾಣಿ ಅವರು ಪತ್ರಿಕಾ ವಿತರಣೆಗೆ ತೆರಳಿ ಪರಿಶೀಲಿಸಿದಾಗ ಬಂಡಲ್ಗಳು ಕಳವಾಗಿರುವುದು ಬೆಳಕಿಗೆ ಬಂದಿದೆ.
ತಾಲ್ಲೂಕು ಆಸ್ಪತ್ರೆ ಮುಂಭಾಗದಲ್ಲಿದ್ದ ಪತ್ರಿಕಾ ವಿತರಣಾ ಸ್ಥಳವನ್ನು ಈಚೆಗೆ ಕೊರೊನೊ ಸೋಂಕಿನ ಕಾರಣಕ್ಕೆ ತಾಪಂ ಕಚೇರಿ ಆವರಣಕ್ಕೆ ಸ್ಥಳಾಂತರಗೊಂಡಿತ್ತು. ಕಳೆದ 10 ತಿಂಗಳ ಹಿಂದೆಯೂ ಪ್ರಜಾವಾಣಿಯ ಸಾವಿರಕ್ಕೂ ಹೆಚ್ಚು ಪ್ರತಿಗಳ ಬಂಡಲ್ಗಳು ಕಳವಾಗಿದ್ದವು. ಕೇವಲ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆ ಕಳವಾಗುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ. ಪತ್ರಿಕೆ ಕಳ್ಳರನ್ನು ಕೂಡಲೇ ಪತ್ತೆಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
‘ಪತ್ರಿಕೆ ಕಳವಾಗಿದ್ದರೂ ಓದುಗರಿಗೆ ತೊಂದರೆಯಾಗದಂತೆ ಬೇರೆಡೆಯಿಂದ ತಂದು ವಿತರಣೆ ಮಾಡಲಾಗಿದೆ. ಸರಿಯಾದ ಸಮಯಕ್ಕೆ ಓದುಗರ ಮನೆಗಳಿಗೆ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ತಲುಪಿವೆ. ಜ್ಞಾನದ ಭಂಡಾರವಾಗಿರುವ ಪತ್ರಿಕೆಗಳನ್ನು ಕಳವು ಮಾಡುವುದು ತಪ್ಪು’ ಎಂದು ಎಂ.ಆರ್.ಚಕ್ರಪಾಣಿ ಹೇಳಿದರು.