ಬೆಂಗಳೂರು:ಮಕ್ಕಳ ಆರೈಕೆಗೆ ಅಂಗನವಾಡಿಗಳನ್ನು ಡೇ–ಕೇರ್ ಕೇಂದ್ರಗಳಾಗಿ ಪರಿವರ್ತನೆ,10ನೇ ತರಗತಿವರೆಗೆ ಉಚಿತ ಶಿಕ್ಷಣ, ಖಾಸಗಿ ಶಾಲೆಗಳ ಆರಂಭಕ್ಕೆ ತಡೆ, ಬೆಂಗಳೂರು ಸಮಗ್ರ ಸಂಚಾರ ಯೋಜನೆ ಜಾರಿ, ಇ–ವಾಹನ ವ್ಯವಸ್ಥೆಗೆ ಪ್ರೋತ್ಸಾಹ...
–ಇವು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಮತದಾರರಿಗೆ ನೀಡಿರುವ ಪ್ರಮುಖ ಭರವಸೆಗಳು. ಶುಕ್ರವಾರ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಶಾಲಾ ಮಕ್ಕಳಿಗೆ ಪ್ರತಿದಿನ ಹಾಲು, ಮೊಟ್ಟೆ, ಹಣ್ಣು ನೀಡಲು ಬಜೆಟ್ ಮೊತ್ತ ಹೆಚ್ಚಳ, ನಗರ ಪ್ರದೇಶಗಳಲ್ಲಿ ಮಕ್ಕಳ ವಾರ್ಡ್ ಸಭೆ ಏರ್ಪಾಟು, ಮಕ್ಕಳ ಮೇಲಿನದಬ್ಬಳಿಕೆ ತಡೆಗೆ ಮಕ್ಕಳ ಸಂರಕ್ಷಣಾ ಮಸೂದೆ ರಚಿಸುವ ಕುರಿತೂ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.
ವೃತ್ತಿಪರ ಶಿಕ್ಷಣ ವ್ಯವಸ್ಥೆ ರೂಪಿಸುವುದು ಹಾಗೂ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವುದರತ್ತ ಹೆಚ್ಚಿನ ಗಮನಹರಿಸಲಾಗುವುದು ಎಂದು ತಿಳಿಸಲಾಗಿದೆ. ವೃತ್ತಿಪರ ತರಬೇತಿ ಪಠ್ಯಕ್ರಮ ವ್ಯವಸ್ಥೆ ಮಾಡುವುದು ಮತ್ತು ಸ್ವಯಂ ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡುವುದು ಪ್ರಣಾಳಿಕೆಯ ಆದ್ಯತೆಗಳಾಗಿವೆ. ಪ್ರತಿ ಕುಟುಂಬಕ್ಕೆ ಉಚಿತ ಮೀಟರ್ ಅಳವಡಿಕೆ, ತಿಂಗಳಿಗೆ 20 ಸಾವಿರ ಲೀಟರ್ ನೀರು ಪೂರೈಕೆ ಕುರಿತು ಭರವಸೆ ನೀಡಲಾಗಿದೆ.
‘ನನ್ನ ಕ್ಷೇತ್ರದ ಜನರ ಬಳಿ ತೆರಳಿ ಖುದ್ದು ಅವರ ಸಮಸ್ಯೆಗಳನ್ನು ಆಲಿಸಿ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದೇನೆ.ಐದು ವರ್ಷದಲ್ಲಿಬೆಂಗಳೂರು ಕೇಂದ್ರ ಒಂದು ಮಾದರಿಕ್ಷೇತ್ರವನ್ನಾಗಿಸುವುದು ನನ್ನ ಗುರಿ. ಅದಕ್ಕಾಗಿ ನಾನು ಶ್ರಮವಹಿಸುತ್ತೇನೆ’ ಎಂದು ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಕಾಶ್ರಾಜ್ ಹೇಳಿದರು.
ಲೇಖಕಿ ವಿಜಯಮ್ಮ, ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ, ಸ್ವರಾಜ್ ಇಂಡಿಯಾ ಪಕ್ಷದ ನಿಶಾ ಗೋಳೂರು, ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಸರ್ದಾರ್ ಖುರೇಶಿ, ದಲಿತ ಮುಸ್ಲಿಂ ಸಂಘಟನೆಯ ಎ.ಜೆ.ಖಾನ್, ಆರ್ಪಿಐ ಪಕ್ಷದ ಮೋಹನ್ ರಾಜ್ ಉಪಸ್ಥಿತರಿದ್ದರು.