ಬೆಂಗಳೂರು: ‘ಪಕ್ಷ ತಾಯಿ ಇದ್ದಂತೆ. ಯಾರಾದರೂ ಮುಜುಗರ ತರುವ ಕೆಲಸ ಮಾಡಿದರೆ ಅಥವಾ ವಿರುದ್ಧವಾದ ಹೇಳಿಕೆ ನೀಡಿದರೆ ಅದನ್ನು ನಿಯಂತ್ರಿಸುವ ಕೆಲಸ ಆಗಬೇಕು. ಪಕ್ಷದ ಶಿಸ್ತು ಪಾಲಿಸದವರ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು.
ರಾಜೀವ್ಗಾಂಧಿ 28ನೇ ಪುಣ್ಯತಿಥಿ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ‘ಸರ್ವಸ್ವವನ್ನೂ ತ್ಯಾಗ ಮಾಡಿ, ಕಾಂಗ್ರೆಸ್ ನನ್ನ ಜೀವನ ಎಂದು ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ. ಆ ನಾಯಕನ ಜೊತೆ ಹೇಗೆ ನಡೆದುಕೊಳ್ಳಬೇಕು ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದರು.
‘18 ವರ್ಷಕ್ಕೆ ಮತದಾನದ ಹಕ್ಕು ತಂದುಕೊಟ್ಟವರು ರಾಜೀವ್ ಗಾಂಧಿ. ಆದರೆ, ಯುವಕರಿಗೆ ಈ ಸತ್ಯ ಅರಿವಾಗಿಲ್ಲ. ಮೋದಿಪರ ಯುವಕರಿದ್ದಾರೆ ಎಂದು ಹೇಳುತ್ತಾರೆ. ಯುವಕರ ಕಣ್ಣಿಗೆ ಪೊರೆ ಆವರಿಸಿದೆ. ತಮಗೆ ಮತದಾನದ ಹಕ್ಕು ನೀಡಿದ ರಾಜೀವ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಎಂಬ ಸತ್ಯ ತಿಳಿಸುವ ಕೆಲಸವನ್ನು ಮಾಡಬೇಕು’ ಎಂದು ತಿಳಿಸಿದರು.
‘ಚಿಕ್ಕ ವಯಸ್ಸಿನಲ್ಲೇ ರಾಜೀವ್ ಗಾಂಧಿ ತೀರಿಕೊಂಡಿದ್ದು ಪಕ್ಷಕ್ಕೆ ತುಂಬಲಾರದ ನಷ್ಟ. ಯುವಕರಿಗೆ ಮತದಾನದ ಹಕ್ಕು ನೀಡಿದ್ದರಿಂದ ನಮಗೆ ಹಿನ್ನೆಡೆಯಾಗುತ್ತಿದೆ. ಯುವಕರ ದಾರಿ ತಪ್ಪಿಸಿ ಬಿಜೆಪಿ ಮತ ಪಡೆಯುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
‘ರಾಜೀವ್ ಬಗ್ಗೆ ಮೋದಿ ಮಾತು ಅವರ ಕೆಟ್ಟ ನಡವಳಿಕೆ ತೋರಿಸುತ್ತದೆ. ಮತಗಟ್ಟೆ ಸಮೀಕ್ಷೆಗಳನ್ನು ನಂಬಲು ಸಾಧ್ಯವಿಲ್ಲ. ಕೇಂದ್ರದಲ್ಲಿ ಪರ್ಯಾಯ ಸರ್ಕಾರ ರಚನೆಯಾಗುವ ವಿಶ್ವಾಸವಿದೆ’ ಎಂದರು.
‘ಆಧುನಿಕ ಭಾರತ ನಿರ್ಮಾಣಕ್ಕೆ ರಾಜೀವ್ ಕೊಡುಗೆ ಮಹತ್ವದ್ದು. ಆದರೆ ಭಯ, ಹಣದ ಕಾರಣದಿಂದ ಮಾಧ್ಯಮಗಳು ಜನರನ್ನುದಾರಿ ತಪ್ಪಿಸುತ್ತಿವೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ದೂರಿದರು.