ಬೆಂಗಳೂರು: ಗುಂಪು ದಾಳಿ ಬಗ್ಗೆ ಕಳವಳ ವ್ಯಕ್ತಪಡಿಸಿ ಪ್ರಧಾನಿಗೆ ಪತ್ರ ಬರೆದಿದ್ದ 49 ಮಂದಿ ಪ್ರಮುಖರ ವಿರುದ್ಧ ಬಿಹಾರದಲ್ಲಿ ಎಫ್ಐಆರ್ ದಾಖಲಿಸಿರುವುದಕ್ಕೆ ರಾಜ್ಯಸಭಾ ಸದಸ್ಯ ಪ್ರೊ.ಎಂ.ವಿ. ರಾಜೀವ್ಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ‘ಜನರ ವಾಕ್ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ. ಸಂವಿಧಾನವೇ ನಮ್ಮ ಸರ್ಕಾರದ ಪವಿತ್ರ ಗ್ರಂಥ ಎಂದು ಹೇಳಿದ್ದೀರಿ. ಸಂವಿಧಾನದಲ್ಲಿ ಎಲ್ಲ ಪ್ರಜೆಗಳಿಗೆ ವಾಕ್ ಸ್ವಾತಂತ್ರ್ಯ ನೀಡಲಾಗಿದೆ. ಸರ್ಕಾರದ ಮಟ್ಟದಲ್ಲಿ ಆಗುತ್ತಿರುವ ಕೆಲವು ನಿರ್ಧಾರಗಳು ನಿಮ್ಮ ಹೇಳಿಕೆಗೆ ವಿರುದ್ಧವಾಗಿವೆ’ ಎಂದು ಆರೋಪಿಸಿದ್ದಾರೆ.
ಸರ್ಕಾರ ಹಾಗೂ ತಮ್ಮ ನೀತಿ, ನಿರ್ಧಾರಗಳನ್ನು ಟೀಕಿಸಿದ ಸಂದರ್ಭ ದಲ್ಲಿ ಪ್ರತಿ ವ್ಯಕ್ತಿಯ ಮೇಲೆ ಎಫ್ಐಆರ್ ದಾಖಲಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ‘ಮನ್ ಕಿ ಬಾತ್’ ಸಮಯದಲ್ಲಿ ನಿಮ್ಮ ಮಾತಿಗೆ ಮನ್ನಣೆ ಸಿಗುತ್ತಿದ್ದು, ಅದು ‘ಮೌನ್ ಕಿ ಬಾತ್’ ಎಂಬಂತಾಗಬಾರದು ಎಂದು ಹೇಳಿದ್ದಾರೆ.