ಹುಬ್ಬಳ್ಳಿ: ಮಹಾತ್ಮ ಗಾಂಧೀಜಿ ಹತ್ಯೆಯ ಘಟನೆಯನ್ನು ಮರುಸೃಷ್ಟಿಸಿದ ಹಿಂದೂ ಮಹಾಸಭಾ ದೇಶದ ಮೊದಲ ಭಯೋತ್ಪಾದನಾ ಕೃತ್ಯವನ್ನು ಬೆಂಬಲಿಸಿದೆ ಎಂದು ಆರೋಪಿಸಿ ಎಸ್ಡಿಪಿಐ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿತು.
ಜನವರಿ 30ರಂದು ಜಗತ್ತಿನಾದ್ಯಂತ ಗಾಂಧೀಜಿ ಅವರ ತ್ಯಾಗ, ಅಹಿಂಸೆ ಸಂದೇಶದ ಸ್ಮರಣೆ ನಡೆಯುತ್ತಿದ್ದರೆ, ಉತ್ತರಪ್ರದೇಶದ ಆಲಿಗಢದಲ್ಲಿ ಹಿಂದೂ ಮಹಾಸಭಾದ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಹಾಗೂ ಸಂಘಟನೆಯ ಸದಸ್ಯರು ಗಾಂಧೀಜಿ ಅವರ ಭಾವಚಿತ್ರಕ್ಕೆ ನಕಲಿ ಪಿಸ್ತೂಲ್ನಿಂದ ಗುಂಡು ಹಾರಿಸುವಂತೆ ಅಣಕ ಪ್ರದರ್ಶನ ನಡೆಸಿ ಹತ್ಯಾ ದಿನವನ್ನು ಶೌರ್ಯ ದಿನವನ್ನಾಗಿ ಆಚರಿಸಿದರು. ಭಯೋತ್ಪಾದನಾ ಕೃತ್ಯವನ್ನು ನಡೆಸುವಂತೆ ಪರೋಕ್ಷವಾಗಿ ಬೆಂಬಲ ನೀಡಲಾಯಿತು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯನ್ನು ಖಂಡಿಸಿ ‘ಗೋಡ್ಸೆಯ ಮರುಜನ್ಮ ಅನುಮತಿಸಲಾರೆವು’ ಎಂಬ ಘೋಷವಾಕ್ಯದೊಂದಿಗೆ ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ದೇಶದ ಜಾತ್ಯತೀತ ಸಿದ್ಧಾಂತವನ್ನೇ ಹತ್ಯೆ ಮಾಡಲು ನಡೆಸಿದ ಪ್ರಯತ್ನ ಇದಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಮೊಹಮ್ಮದ್ ಲಷ್ಕರ ರಫೀಕ್ ಹೇಳಿದರು.
ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಪ್ರಧಾನ ಕಾರ್ಯದರ್ಶಿ ಇಷಾದ್ ಅಹ್ಮದ್ ಅತ್ತಾರ್, ಉಪಾಧ್ಯಕ್ಷ ಸಮೀರ ಬೆಟಗೇರಿ, ಇರ್ಷಾದ್ ಅಹ್ಮದ್ ರಿತ್ತಿ, ಅಬ್ದುಲ್ಲಾಹ ಕುಮಳೂರ ಇದ್ದರು.