ಬೆಂಗಳೂರು: ಬಿಬಿಎಂಪಿ ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ನಿವೇಶನ, ಕಟ್ಟಡಗಳಿಗೆ ಪರ್ಯಾಯವಾಗಿ ನೀಡುವ ಅಭಿವೃದ್ಧಿ ಹಕ್ಕು ವರ್ಗಾವಣೆ (ಡಿಆರ್ಸಿ) ಪ್ರಕರಣದಲ್ಲಿ ನಡೆದಿದೆ ಎನ್ನಲಾದ ವಂಚನೆಗೆ ಸಂಬಂಧಿಸಿದಂತೆ‘ವಾಲ್ಮಾರ್ಕ್ ರಿಯಾಲಿಟಿ ಹೋಲ್ಡಿಂಗ್ ಪ್ರೈವೇಟ್ ಲಿ’. ಮಾಲೀಕ ರತನ್ ಬಾಬುಲಾಲ್ ಲಾಥ್ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದಿರುವುದರಿಂದ ತನಿಖೆ ವಿಳಂಬವಾಗುತ್ತಿದೆ.
7 ಕಿ.ಮೀ ಉದ್ದದ ಭಟ್ಟರಹಳ್ಳಿ– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆಗೆ ವಶಪಡಿಸಿಕೊಂಡಿರುವ ಕವಡೇನಹಳ್ಳಿ ಸರ್ವೆ ನಂಬರ್ 132ರ ಜಮೀನಿಗೆ ಪರ್ಯಾಯವಾಗಿ ನೀಡಿರುವ ಅಭಿವೃದ್ಧಿ ಹಕ್ಕುಪತ್ರ ಮಾರಾಟ ಹಗರಣ ಸಂಬಂಧ ಎಸಿಬಿ ಡಿವೈಎಸ್ಪಿ ರವಿಕುಮಾರ್ ನೇತೃತ್ವದ ತಂಡ ಸತತ ಮೂರು ದಿನ ರತನ್ ವಿಚಾರಣೆ ನಡೆಸಿದ್ದು, ಅಧಿಕಾರಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿಲ್ಲ. ‘ನಾನು ಯಾವುದೇ ತಪ್ಪೂ ಮಾಡಿಲ್ಲ’ ಎಂಬ ಉತ್ತರ ಕೊಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರತನ್ ಅವರ ವಿಚಾರಣೆ 13ರಂದು ಸೋಮವಾರವೂ ಮುಂದುವರಿಯಲಿದೆ. ಇವರ ಜೊತೆ ಮಧ್ಯವರ್ತಿಗಳಾಗಿರುವ ಗೌತಮ್, ಸುರೇಶ್ ಹಾಗೂ ಸುರೇಂದ್ರನಾಥ್ ಸೇರಿದಂತೆ ಹಲವರನ್ನು ವಿಚಾರಣೆಗೆ ಕರೆಯಲಾಗಿದೆ. ಜಮೀನಿನ ಮೂಲ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಮೂಲಗಳು ಹೇಳಿವೆ.
ಪ್ರಕರಣವೇನು?: ಡಿಆರ್ಸಿ ವರ್ಗಾವಣೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಎಸಿಬಿ ಅಧಿಕಾರಿಗಳು ಮೇ 4ರಂದು ವಾಲ್ಮಾರ್ಕ್ ಕಂಪನಿ ಕಚೇರಿ, ರತನ್ಲಾಲ್ ಮನೆ ಮತ್ತು ಕಂಪನಿ ಉದ್ಯೋಗಿ ಅಮಿತ್ ಜೆ. ಬೋಳಾರ್ ಅವರ ಮನೆ ಮೇಲೆ ದಾಳಿ ನಡೆಸಿಮಹತ್ವದ ದಾಖಲೆ ವಶಪಡಿಸಿಕೊಂಡಿದ್ದರು. ಈ ವಂಚನೆ ಸಂಬಂಧ ಎಸಿಬಿಗೆ ಮೊದಲಿಗೆ ದೂರು ಬಂದಿತ್ತು. ದೂರು ಆಧರಿಸಿ ಬಿಡಿಎ ಎಇಇ ಕೃಷ್ಣಲಾಲ್ (ನಿಯೋಜನೆ) ಅವರ ಮನೆ ಮೇಲೆ ದಾಳಿ ಮಾಡಲಾಗಿತ್ತು.
ಬಿಬಿಎಂಪಿ ಮಾಹಿತಿ ಸಂಗ್ರಹ
ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ವ್ಯವಸ್ಥೆ ಜಾರಿಯಾದ ಬಳಿಕ ಎಷ್ಟು ರಸ್ತೆಗಳು ವಿಸ್ತರಣೆ ಆಗಿವೆ; ಎಷ್ಟು ಜಮೀನು, ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ; ಎಷ್ಟು ಅಭಿವೃದ್ಧಿ ಹಕ್ಕು ಪತ್ರ (ಡಿಆರ್ಸಿ) ನೀಡಲಾಗಿದೆ ಎಂಬ ಮಾಹಿತಿಯನ್ನು ಎಸಿಬಿಗೆ ರವಾನಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.
ಈ ಬಗ್ಗೆ ಮಾಹಿತಿ ನೀಡುವಂತೆ ಎಸಿಬಿ ಅಧಿಕಾರಿಗಳು ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಹಾಗೂ ಬಿಡಿಎ ಕಮಿಷನರ್ ರಾಕೇಶ್ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಮಂಜುನಾಥ್ ಪ್ರಸಾದ್ ಎಲ್ಲ ಎಂಟು ವಲಯ ಕಚೇರಿಗಳ ಜಂಟಿ ಆಯುಕ್ತರಿಂದ ಮಾಹಿತಿ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಿಡಿಆರ್ ವ್ಯವಸ್ಥೆ 2005ರಿಂದ ಜಾರಿಗೆ ಬಂದಿದ್ದು ಹತ್ತು ವರ್ಷ ಬಿಬಿಎಂಪಿ ಬಳಿ ಅಧಿಕಾರವಿತ್ತು. 2015ರ ಬಳಿಕ ಬಿಡಿಎ ಡಿಆರ್ಸಿ ವಿತರಿಸುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.