ಬೆಂಗಳೂರು: ವೈಟ್ಫೀಲ್ಡ್ ಉಪವಿಭಾಗದ ಕಾಡುಗೋಡಿ ವಾರ್ಡ್ನಲ್ಲಿ ಆಸ್ತಿಗಳ ಖಾತಾ ವರ್ಗಾವಣೆ ಸಂದರ್ಭದಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರಿಗೆ ದೂರು ನೀಡಿದ್ದಾರೆ.
ಈ ದೂರಿನ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುವಂತೆ ಆಯುಕ್ತರು ಮಹದೇವಪುರ ವಲಯದ ಜಂಟಿ ಆಯುಕ್ತರಿಗೆ ಸೂಚಿಸಿದ್ದಾರೆ.
‘ಕಾಡುಗೋಡಿ ಕೈಗಾರಿಕಾ ಪ್ರದೇಶದಲ್ಲಿ 11 ಎಕರೆ 34 ಗುಂಟೆ ಜಾಗವನ್ನು ‘ಶ್ರೇನೋ ಲಿಮಿಟೆಡ್’ ಕಂಪನಿಯ ಹೆಸರಿನಿಂದ ‘ಆಕ್ಮೆರಿನೊ ರಿಪಲ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್’ ಕಂಪನಿಯ ಹೆಸರಿಗೆ ವರ್ಗಾಯಿಸಲಾಗಿದೆ.
ಈ ಸಂಬಂಧ ಸ್ವತ್ತಿನ ಮಾಲೀಕರಿಂದ ವಸೂಲಿ ಮಾಡಬೇಕಿದ್ದ ₹ 1.19 ಕೋಟಿ ಅಭಿವೃದ್ಧಿ ಶುಲ್ಕವನ್ನು ಕಟ್ಟಿಸಿಕೊಳ್ಳದೆಯೇ ಕಂದಾಯ ಅಧಿಕಾರಿ ಬಸವಾಚಾರಿ ಅವರು ಖಾತಾ ವರ್ಗಾವಣೆ ಮಾಡಿದ್ದಾರೆ. ಇದರಿಂದ ಪಾಲಿಕೆಯ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ’ ಎಂದು ರಮೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ.