ಹುಬ್ಬಳ್ಳಿ: ‘ಮಹಿಳೆಯರಿಗೆ ಪ್ರವೇಶ ನೀಡಲು ವಿರೋಧ ವ್ಯಕ್ತಪಡಿಸಿದರೆ, ಶಬರಿ ಮಲೆ ಆಡಳಿತ ಮಂಡಳಿಯನ್ನೇ ಹೊರ ಹಾಕಬೇಕು’ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಶಬರಿ ಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡಲು ಆಡಳಿತ ಮಂಡಳಿಯೇ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ‘ಮಹಿಳೆ ಮತ್ತು ಪುರುಷ ಸಮಾನರಾಗಿದ್ದು, ಯಾವುದೇ ವಿಷಯದಲ್ಲಿ ತಾರತಮ್ಯ ಮಾಡಬಾರದು. ಗುಡಿ ಪೂಜಾರಿಯ ಸ್ವತ್ತಲ್ಲ’ ಎಂದರು.
‘ಮಹದಾಯಿ ವಿಷಯದಲ್ಲಿ ಈ ಹಿಂದೆ ವಿಳಂಬ ಧೋರಣೆ ಅನುಸರಿಸಲಾಗಿದೆ. ಆದರೆ ಈಗ ಆ ರೀತಿ ಆಗಲು ಬಿಡುವುದಿಲ್ಲ. ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಅವರ ಗಮನ ಸೆಳೆಯಲಾಗುವುದು. ಇದೇ 23ರಂದು ಕುಮಾರಸ್ವಾಮಿ ಕಿತ್ತೂರಿಗೆ ಬರುತ್ತಾರೆ, ಆಗ ಸಹ ಈ ವಿಷಯ ಪ್ರಸ್ತಾಪಿಸಲಾಗುತ್ತದೆ. ನಮಗೆ ಹಂಚಿಕೆಯಾಗಿರುವ ನೀರನ್ನು ಸಮಪರ್ಕವಾಗಿ ಬಳಸಿಕೊಳ್ಳಲು ಅಗತ್ಯ ಕಾಮಗಾರಿ ಕೈಗೊಳ್ಳಬೇಕು’ ಎಂದರು.