ಕೋಲ್ಕತ್ತ: ಭಾರತ ಶಾಂತಿಯನ್ನು ಬಯಸುತ್ತದೆ. ಆದರೆ, ಯಾರಾದರೂ ಕೆಟ್ಟ ದೃಷ್ಟಿ ಬೀರಿದರೆ, ಅದಕ್ಕೆ ತಕ್ಕಉತ್ತರ ನೀಡುವ ಸಾಮರ್ಥ್ಯ ದೇಶಕ್ಕಿದೆ ಎಂದುಕೇಂದ್ರದ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ಗುರುವಾರ ತಿಳಿಸಿದರು.
ದೇಶ ದೃಢವಾದ ನಾಯಕತ್ವವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂಡಾಡಿದ ಅವರು, ದೇಶದ 20 ಯೋಧರು ಮಡಿದಿದ್ದಾರೆ, ಚೀನಿಯರ ಕಡೆ ಮೃತರ ಸಂಖ್ಯೆ ಇದರ ದುಪ್ಪಟ್ಟಾಗಿರುತ್ತದೆ ಎಂದು ಹೇಳಿದರು.
ಈಗ ನಿಮಗೆ ಎರಡು ‘ಸಿ’ ಮಾತ್ರ ಕೇಳಿಸುತ್ತಿದೆ. ಒಂದು ಕೊರೊನಾ ಸೋಂಕು ಮತ್ತು ಚೀನಾ. ನಾವು ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಬಯಸುತ್ತೇವೆ. ಆದರೆ, ಭಾರತದ ಮೇಲೆ ಯಾರಾದರೂ ವಕ್ರದೃಷ್ಟಿ ಬೀರಿದರೆ, ತಕ್ಕ ಉತ್ತರ ನೀಡುತ್ತೇವೆ ಎಂದು ಪ್ರತಿಪಾದಿಸಿದರು.
ಎಷ್ಟು ಜನರು ಸತ್ತಿದ್ದಾರೆ ಎಂಬುದನ್ನು ಚೀನಾ ಇನ್ನು ಹೇಳಿಕೊಂಡಿಲ್ಲ ಎಂಬುದನ್ನು ನೀವು ಗಮನಿಸಿರಬಹುದು ಎಂದು ಅವರು ತಮ್ಮ ಮಾತಿಗೆ ಸಮರ್ಥನೆಯಾಗಿ ಹೇಳಿದರು. ಅವರು ವಿಡಿಯೊ ಸಂವಾದದಲ್ಲಿ ಮಾತನಾಡುತ್ತಿದ್ದರು.