ಗುವಾಹಟಿ: ಅಸ್ಸಾಂನ 26 ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದು, ಭೀಕರ ಪ್ರವಾಹ ಉಂಟಾಗಿದೆ. ಇದರಿಂದ 56,64,499 ಮಂದಿ ಬಾಧಿತರಾಗಿದ್ದಾರೆ ಎಂದು ಸರ್ಕಾರ ಹೇಳಿದೆ.
ಪ್ರವಾಹ ಮತ್ತು ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 119ಕ್ಕೆ ಏರಿದೆ. ಅವರಲ್ಲಿ 93 ಮಂದಿ ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದರೆ, 26 ಮಂದಿ ಭೂಕುಸಿತದಿಂದ ಸಾವಿಗೀಡಾಗಿದ್ದಾರೆ.
56,64,499 people have been affected in 26 districts of Assam. The state government has set up 587 relief camps and 93 people have lost their lives in flood-related incidents: State Government pic.twitter.com/ikJdXfWNKp
ಅಸ್ಸಾಂನಾದ್ಯಂತ ಸುಮಾರು 1.19 ಲಕ್ಷ ಹೆಕ್ಟೇರ್ ಕೃಷಿ ಭೂಮಿ ನೀರಿನಿಂದ ಜಲಾವೃತಗೊಂಡಿದೆ. ಹಲವೆಡೆ 587 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 1.25 ಲಕ್ಷ ಜನರು ಆಶ್ರಯ ಪಡೆದಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ರಾಜ್ಯಪಾಲ ಜಗದೀಶ್ ಮುಖಿ, ‘ಪ್ರವಾಹ ಮತ್ತು ಭೂಕುಸಿತದಿಂದ ಆಗಿರುವ ನಷ್ಟ ಭರಿಸಲು ಪರಿಹಾರ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ’ ತಿಳಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್ ಮಾತನಾಡಿ, ‘ಪ್ರವಾಹದಿಂದ ಹಲವು ಜಿಲ್ಲೆಗಳ ಮೇಲೆ ತೀವ್ರ ಪರಿಣಾಮ ಉಂಟಾಗಿದೆ. ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್ ಸೋಂಕು, ಪ್ರವಾಹ, ಭೂಕುಸಿತದ ವಿರುದ್ಧ ಏಕಕಾಲದಲ್ಲಿ ಹೋರಾಡಬೇಕಾಗಿದೆ’ ಎಂದರು.
ಪರಿಹಾರ ಕಾರ್ಯಗಳಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಮಾಹಿತಿ ಇದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದಾರೆ.