ನವದೆಹಲಿ:‘ಪೈಲಟ್ಗಳ ವೇತನವನ್ನು ಗರಿಷ್ಠ ಶೇಕಡ 75ರಷ್ಟು ಕಡಿತ ಮಾಡುವ ಸರ್ಕಾರದ ನಿರ್ಧಾರವು ತಾರತಮ್ಯದಿಂದ ಕೂಡಿದ ವಿಪರೀತ ಕ್ರಮವಾಗಿದೆ’ ಎಂದು ಏರ್ ಇಂಡಿಯಾ ಸಂಸ್ಥೆಯ ಪೈಲಟ್ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೇತನ ಕಡಿತ ಕ್ರಮವನ್ನು ವಿರೋಧಿಸಿ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪೈಲಟ್ಗಳು ಪತ್ರ ಬರೆದಿದ್ದಾರೆ.
‘ಸರ್ಕಾರದ ನಿರ್ಧಾರ ಮಾನಸಿಕ ಒತ್ತಡ, ಹತಾಶೆಗೀಡು ಮಾಡುತ್ತದೆ. ಸರ್ಕಾರ ಮೊದಲಿನಿಂದಲೂ ಇಂಥ ಕಾರ್ಮಿಕ ವಿರೋಧಿ ಕ್ರಮ ತೆಗೆದುಕೊಳ್ಳುತ್ತಿದೆ’ ಎಂದು ಪೈಲಟ್ಗಳು ದೂರಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರುವಲ್ಲಿ ಪೈಲಟ್ಗಳು ಪ್ರಮುಖ ಪಾತ್ರ ವಹಿಸಿದ್ದರು. ಈ ಸಂದರ್ಭದಲ್ಲಿ 60 ಮಂದಿಗೆ ಸೋಂಕು ದೃಢವಾಗಿತ್ತು. ಈಗಿನ ಕ್ರಮದಿಂದಾಗಿ ಅವರ ಕುಟುಂಬ ಸದಸ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಉದ್ಯೋಗ ನಷ್ಟ ಇಲ್ಲ: ‘ನೌಕರರನ್ನು ವಜಾಗೊಳಿಸಿರುವಇತರ ವಿಮಾನಯಾನ ಸಂಸ್ಥೆಗಳಂತೆ, ತನ್ನ ಯಾವುದೇ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಿಲ್ಲ’ ಎಂದುಏರ್ ಇಂಡಿಯಾ ಸಂಸ್ಥೆ ಗುರುವಾರ ತಿಳಿಸಿದ್ದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.