ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಇಮೇಜ್ ರೂಪಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ವ್ಯಕ್ತಿಯೊಬ್ಬನ ದೃಷ್ಟಿಕೋನವು ರಾಷ್ಟ್ರದ ದೃಷ್ಟಿಕೋನಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಟ್ವಿಟರ್ನಲ್ಲಿ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ ಅವರು, ಗಡಿಯಲ್ಲಿನ ಭಾರತ-ಚೀನಾ ಸಂಘರ್ಷದ ಕುರಿತು ಸ್ಪಷ್ಟೀಕರಣ ಕೇಳಿದ್ದಾರೆ. ಅಲ್ಲದೆ, ದೇಶ ಮುಂದುವರಿಯಲು ಈ ಸರ್ಕಾರದಲ್ಲಿ ಸರಿಯಾದ ದೃಷ್ಟಿಕೋನವೇ ಇಲ್ಲ ಎಂದು ಆರೋಪಿಸಿದ್ದಾರೆ.
‘ಪ್ರಧಾನಿ 100% ತಮ್ಮ ಚಿತ್ರಣವನ್ನು ಕಟ್ಟಿಕೊಳ್ಳುವತ್ತ ಮಾತ್ರ ಗಮನಹರಿಸಿದ್ದಾರೆ. ಅತಿಕ್ರಮಿಸಿಕೊಳ್ಳಲಾದ ಭಾರತದ ಎಲ್ಲ ಸಂಸ್ಥೆಗಳು ಈ ಕಾರ್ಯವನ್ನು ಮಾಡುವಲ್ಲಿ ನಿರತವಾಗಿವೆ. ಒಬ್ಬ ವ್ಯಕ್ತಿಯ ಚಿತ್ರಣವು ರಾಷ್ಟ್ರೀಯ ದೃಷ್ಟಿಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಚೀನಾದ ಆಕ್ರಮಣಶೀಲತೆ ಕುರಿತು ಎರಡು ನಿಮಿಷಗಳ ವಿಡಿಯೋದೊಂದಿಗೆ ಅವರು ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಭಾರತ ದೊಡ್ಡ ಅವಕಾಶಗಳನ್ನು ಕಳೆದುಕೊಳ್ಳುತ್ತಿದೆ ಎನಿಸುತ್ತಿದೆ. ಯಾಕೆಂದರೆ, ನಮಗೆ ದೂರಾಲೋಚನೆಯಿಲ್ಲ, ದೊಡ್ಡದ್ದರ ಬಗ್ಗೆ ಭಾರತ ಯೋಚಿಸುತ್ತಿಲ್ಲ. ಜೊತೆಗೆ ನಾವು ಆಂತರಿಕ ಸಮತೋಲನನ್ನು ಅಲುಗಾಡಿಸುತ್ತಿದ್ದೇವೆ,’ ಎಂದು ಅವರು ಹೇಳಿದರು.
‘ಪ್ರಶ್ನೆಗಳನ್ನು ಕೇಳುವುದು, ಕೆಲಸ ಮಾಡುವಂತೆ ಪ್ರಧಾನಿ ಮೇಲೆ ಒತ್ತಡ ಹಾಕುವುದು, ಆ ಮೂಲಕ ಕೆಲಸ ಮಾಡಿಸುವುದು ನನ್ನ ಜವಾಬ್ದಾರಿ. ದೇಶದ ಪ್ರಗತಿಗೆ ದೃಷ್ಟಿಕೋನ ನೀಡುವುದು ಪ್ರಧಾನಿಯ ಜವಾಬ್ದಾರಿ. ಆದರೆ. ಅದು ಇಲ್ಲದ ಕಾರಣಕ್ಕೇ ಚೀನಾ ಇಂದು ಅಲ್ಲಿದೆ,’ ಎಂದು ರಾಹುಲ್ ಮಾರ್ಮಿಕವಾಗಿ ಮಾತನಾಡಿದ್ದಾರೆ.
ಇದಕ್ಕೂ ಹಿಂದೆ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಮಂತ್ರಿ ಕೇವಲ ತಮ್ಮ ಚಿತ್ರಣದ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಬಿಜೆಪಿ, ರಾಹುಲ್ ಗಾಂಧಿ ಕೆಸರೆರಚಾಟದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದರು.
ರಾಹುಲ್ ಗಾಂಧಿ ರಕ್ಷಣಾ ಮತ್ತು ವಿದೇಶಾಂಗ ನೀತಿ ವಿಷಯಗಳನ್ನು ರಾಜಕೀಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದು 1962 ರ ಹಿಂದಿನ ಪಾಪಗಳನ್ನು ತೊಳೆದುಕೊಳ್ಳಲು, ಆ ಮೂಲಕ ಭಾರತವನ್ನು ದುರ್ಬಲಗೊಳಿಸುವ ರಾಜವಂಶದ ಹತಾಶೆಯನ್ನು ತೋರಿಸುತ್ತದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಗೇಲಿ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.