ಇಸ್ಲಾಮಾಬಾದ್: ಗಡಿ ನಿಯಂತ್ರಣ ರೇಖೆ (ಎಲ್ಒಸಿ) ವ್ಯಾಪ್ತಿಯಲ್ಲಿ ‘ರಕ್ಷಣಾತ್ಮಕವಾಗಿ ದಾಳಿ’ ನಡೆಸುವ ಹಕ್ಕನ್ನು ಭಾರತ ಹೊಂದಿದೆ ಎಂಬ ಸೇನೆಯ ನೂತನ ಮುಖ್ಯಸ್ಥರ ಹೇಳಿಕೆಯನ್ನು ಪಾಕಿಸ್ತಾನ, ‘ಬೇಜವಾಬ್ದಾರಿಯುತ ಹೇಳಿಕೆ’ಎಂದು ಖಂಡಿಸಿದೆ.
ಸೇನೆಯ ನೂತನ ಮುಖ್ಯಸ್ಥರಾದ ಜನರಲ್ ಮನೋಜ್ ಮುಕುಂದ್ ನರವಣೆ ಈ ಹೇಳಿಕೆ ನೀಡಿದ್ದರು. ‘ಭಯೋತ್ಪಾದನೆಗೆ ನೆರವು ನೀಡುವ ತನ್ನ ನೀತಿಯನ್ನು ಪಾಕಿಸ್ತಾನ ಬದಲಿಸದೇ ಇದ್ದರೆ, ಭಯೋತ್ಪಾದನೆಯ ಮೂಲ ಹತ್ತಿಕ್ಕಲು ದಾಳಿ ನಡೆಸುವ ರಕ್ಷಣಾತ್ಮಕ ದಾಳಿಯ ಹಕ್ಕನ್ನು ನಾವು ಹೊಂದಿರುತ್ತೇವೆ’ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ, ‘ಗಡಿ ನಿಯಂತ್ರಣ ರೇಖೆ ಮಿತಿಯಲ್ಲಿ ದಾಳಿ ನಡೆಸುವ ಕುರಿತ ಸೇನಾ ಮುಖ್ಯಸ್ಥರ ಹೇಳಿಕೆಗೆ ನಾವು ವಿಷಾದಿಸುತ್ತೇವೆ’ ಎಂದು ಹೇಳಿಕೆ ನೀಡಿದೆ.
‘ಭಾರತದ ದಾಳಿಯನ್ನು ಎದುರಿಸುವ ಸಾಮರ್ಥ್ಯ ಕುರಿತು ಯಾವುದೇ ಶಂಕೆ ಬೇಡ. ಬಾಲಾಕೋಟ್ ಪ್ರಕರಣದಲ್ಲಿ ಪಾಕಿಸ್ತಾನದ ಪ್ರತ್ಯುತ್ತರವನ್ನು ಯಾರೂ ಮರೆಯಬಾರದು‘ ಎಂದು ಪ್ರತಿಕ್ರಿಯಿಸಿದೆ.