ನವದೆಹಲಿ: ಎರಡು ದಿನಗಳ ಸೌದಿ ಅರೇಬಿಯಾ ಪ್ರವಾಸದಲ್ಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರು ಸೌದಿ ಯುವರಾಜನನ್ನು ಬುಧವಾರ ಭೇಟಿಯಾದರು. ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿಲುವು ಹಾಗೂ ಕಾಶ್ಮೀರದ ಸ್ಥಿತಿ ಬಗ್ಗೆ ಅವರು ಮಾಹಿತಿ ನೀಡಿದರು.
ಕಾಶ್ಮೀರದ ವಿಚಾರದಲ್ಲಿ ದೀರ್ಘಕಾಲದಿಂದ ಭಾರತ ಅನುಸರಿಸುತ್ತಿರುವ ನೀತಿಯ ಬಗ್ಗೆ ಅರಿವಿದೆ ಎಂದು ತಿಳಿಸಿದ ಸೌದಿ ಯುವ ರಾಜ ಸಲ್ಮಾನ್, ಪಾಕಿಸ್ತಾನ ಹಾಗೂ ಭಾರತದ ನಡುವಿನ ಬಿಕ್ಕಟ್ಟು ಶಮನಗೊಳ್ಳುವ ಅಗತ್ಯವಿದೆ ಎಂದು ಒತ್ತು ಹೇಳಿದರು.
ಪಾಕಿಸ್ತಾನದ ಮಿತ್ರಕೂಟದ ಭಾಗವಾಗಿರುವ ಸೌದಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ಕಡೆಗಿದೆ. ಉಗ್ರವಾದದ ಸವಾಲು ಎದುರಿಸಲು ಸಹಕಾರದವಾಗ್ದಾನ ನೀಡಿದೆ.
ಸೌದಿಯ ತೈಲ ಘಟಕಗಳ ಮೇಲೆ ಇತ್ತೀಚೆಗೆ ನಡೆದ ಡ್ರೋನ್ ದಾಳಿ ಕುರಿತೂ ಚರ್ಚೆ ನಡೆಯಿತು. ಸೌದಿಯು ಭಾರತಕ್ಕೆ ತೈಲ ಪೂರೈಸುವ ಪ್ರಮುಖ ರಾಷ್ಟ್ರವಾಗಿದೆ. ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ ಎಂದು ಸೌದಿ ಇದೇ ವೇಳೆ ಭರವಸೆ ನೀಡಿತು.