ಇಸ್ಲಾಮಾಬಾದ್: ಭಾರತವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭಿಸಿರುವುದನ್ನು ಪಾಕಿಸ್ತಾನ ಟೀಕಿಸಿದ್ದು, ಇದು ಭಾರತದಲ್ಲಿ ಮುಸ್ಲಿಮರು ಹೇಗೆ ಅಂಚಿನಲ್ಲಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದೆ.
‘ಇಡೀ ಜಗತ್ತೇ ಕೋವಿಡ್–19 ಸಾಂಕ್ರಾಮಿಕ ರೋಗದ ಸಮಸ್ಯೆಯನ್ನು ಎದುರಿಸುತ್ತಿರುವಾಗ, ಆರ್ಎಸ್ಎಸ್ ಮತ್ತು ಬಿಜೆಪಿ ಜತೆಗೂಡಿ ಹಿಂದುತ್ವದ ಕಾರ್ಯಸೂಚಿಯನ್ನು ಮುನ್ನಡೆಸುತ್ತಿವೆ’ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ (ಎಫ್ಒ) ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
’ಮೇ 26ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶುರುವಾಗಿರುವುದನ್ನು ಪಾಕಿಸ್ತಾನ ಸರ್ಕಾರ ಮತ್ತು ಜನರು ಕಟುವಾಗಿ ಖಂಡಿಸುತ್ತಾರೆ. ಮಂದಿರದ ನಿರ್ಮಾಣ ಕಾರ್ಯ 2019ರ ನ. 9ರಂದು ಭಾರತದ ಸುಪ್ರೀಂ ಕೋರ್ಟಿನ ತೀರ್ಪಿನ ಮುಂದುವರಿದ ಭಾಗವಾಗಿದೆ. ಇದು ನ್ಯಾಯಯುತವಾದ ಬೇಡಿಕೆಗಳನ್ನು ಎತ್ತಿಹಿಡಿಯುವಲ್ಲಿ ಸಂಪೂರ್ಣ ವಿಫಲವಾಗಿದೆ’ ಎಂದೂ ಎಫ್ಒ ಹೇಳಿದೆ.
ಕೋರ್ಟ್ ತೀರ್ಪಿನ ಬಗ್ಗೆ ಪಾಕಿಸ್ತಾನ ಮಾಡಿರುವ ಆಪಾದನೆಗಳನ್ನು ಭಾರತವು ಅನಗತ್ಯ ಮತ್ತು ಅನಪೇಕ್ಷಿತ ಟೀಕೆಗಳೆಂದು ಪದೇ ಪದೇ ತಿರಸ್ಕರಿಸಿದೆ.
‘ಬಾಬರಿ ಮಸೀದಿ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಪ್ರಕ್ರಿಯೆಗೆ ಸಂಬಂಧಿಸಿದ ಬೆಳವಣಿಗೆಗಳು ಭಾರತದ ಮುಸ್ಲಿಮರನ್ನು ಹೇಗೆ ಅಂಚಿನಲ್ಲಿಡಲಾಗುತ್ತಿದೆ ಎಂಬುದಕ್ಕೆ ಎದ್ದುಕಾಣುವ ಉದಾಹರಣೆಗಳಾಗಿವೆ’ ಎಂದು ಪಾಕಿಸ್ತಾನ ದೂರಿದೆ.