ಲಂಡನ್:ವಂಚನೆ ಹಾಗೂ ಹಣ ಅಕ್ರಮ ವರ್ಗಾವಣೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಫೆಬ್ರುವರಿ 27ರ ವರೆಗೆ ವಿಸ್ತರಿಸಿ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಗುರುವಾರ ಆದೇಶಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ₹ 13,500 ಕೋಟಿ ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನೀರವ್ ಮೋದಿಯನ್ನು ಭಾರತಕ್ಕೆ ಕರೆತರಲು ತನಿಖಾ ಸಂಸ್ಥೆಗಳು ಪ್ರಯತ್ನ ಮುಂದುವರಿಸಿವೆ.
ನೈಋತ್ಯ ಲಂಡನ್ದಲ್ಲಿರುವ ಜೈಲಿನಲ್ಲಿ ಮೋದಿ ಇದ್ದಾರೆ. ಅಲ್ಲಿಂದಲೇ ವಿಡಿಯೊ ಮೂಲಕ ವಿಚಾರಣೆ ನಡೆಸಿದ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಡೆವಿಡ್ ರಾಬಿನ್ಸನ್ ಅವರು ಮೋದಿ ಬಂಧನವನ್ನು ವಿಸ್ತರಿಸಿ ಆದೇಶಿಸಿದರು.
ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತ ವಿಚಾರಣೆ 2020ರ ಮೇ 11 ರಿಂದ ಐದು ದಿನಗಳವರೆಗೆ ವಿಚಾರಣೆ ನಡೆಸಲು ನಿಗದಿಪಡಿಸಲಾಗಿದೆ.
ಕಳೆದ ವರ್ಷದ ಮಾರ್ಚ್ 19 ರಂದು ಮೋದಿಯನ್ನು ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ. ಮೋದಿಯ ಜಾಮೀನು ಅರ್ಜಿ ನಾಲ್ಕು ಬಾರಿ ತಿರಸ್ಕೃತಗೊಂಡಿದೆ. ಬ್ರಿಟನ್ ಹೈಕೋರ್ಟ್ ಸಹ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.