ದುಬೈ (ಪಿಟಿಐ): ಅಂತರರಾಷ್ಟ್ರೀಯ ವಿಮಾನಯಾನಕ್ಕೆ ಭಾರತ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಆರು ಮಂದಿ ಭಾರತೀಯರು ಕಳೆದ ಐದು ದಿನಗಳಿಂದ ಇಲ್ಲಿನ ವಿಮಾನನಿಲ್ದಾಣದಲ್ಲಿ ಅತಂತ್ರರಾಗಿದ್ದಾರೆ.
ವಿವಿಧ ಐರೋಪ್ಯ ರಾಷ್ಟ್ರಗಳಿಂದ ಇವರು ದುಬೈ ನಿಲ್ದಾಣಕ್ಕೆ ಮಾರ್ಚ್ 18ರಂದು ಬಂದಿದ್ದರು. ಇವರು ಅದೇ ದಿನ ಸಂಜೆ ನವದೆಹಲಿಗೆ ಎಮಿರೇಟ್ಸ್ ವಿಮಾನದಲ್ಲಿ ತೆರಳಬೇಕಿತ್ತು. ಅದೇ ದಿನ ಭಾರತವೂ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಇವರು ಅತಂತ್ರರಾದರು.
ಅಂದಿನಿಂದ ಇಲ್ಲಿಯವರೆಗೂ ಅವರು ದುಬೈ ನಿಲ್ದಾಣದ ಟರ್ಮಿನಲ್ 3ರಲ್ಲಿ ಉಳಿದಿದ್ದಾರೆ. ಇವರ ಪೈಕಿ ಮೂವರು ಪಂಜಾಬ್ನವರಾಗಿದ್ದರೆ, ರಾಜಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶದ ತಲಾ ಒಬ್ಬರು ಸೇರಿದ್ದಾರೆ.
‘ಏರ್ಪೋರ್ಟ್ ಬೆಂಚ್ನಲ್ಲಿಯೇ ಮಲಗುವಂತಾಗಿದೆ. ಈ ಅನಿಶ್ಚಿತತೆ ಎಲ್ಲಿಯವರೆಗೆ ಮುಂದುವರಿಯಲಿದೆ ಎಂಬುದು ತಿಳಿದಿಲ್ಲ’ ಎಂದು ದೆಹಲಿ ಮೂಲದ ದೀಪಕ್ ಗುಪ್ತಾ ಪ್ರತಿಕ್ರಿಯಿಸಿದರು.
ಕೋವಿಡ್ ಪೀಡಿತನೊಂದಿಗೆ ಸೆಲ್ಫಿ- ಅಮಾನತು:
ಪಾಕಿಸ್ತಾನದಲ್ಲಿ ಕೋವಿಡ್ ಸೋಂಕು ಪೀಡಿತ ಸಹೋದ್ಯೋಗಿಯ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದ ಆರು ಮಂದಿ ನೌಕರರನ್ನು ಖೈರಾಪುರ ಜಿಲ್ಲಾಧಿಕಾರಿ ಅಮಾನತುಪಡಿಸಿದ್ದಾರೆ.