ಉಡುಪಿ: ಸ್ವತಃ 18 ಕಿ.ಮೀ ರಿಕ್ಷಾ ಚಲಾಯಿಸಿ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ್ದ ಆಶಾ ಕಾರ್ಯಕರ್ತೆ ಹಾಗೂ ಆಟೊ ಚಾಲಕಿಯೂ ಆಗಿರುವ ರಾಜೀವಿ ಅವರ ಕಾರ್ಯಕ್ಕೆ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಟ್ವಿಟ್ಟರ್ನಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
‘ಕರ್ನಾಟಕದ ಉಡುಪಿಯಲ್ಲಿ ಬೆಳಗಿನ ಜಾವ ಮೂರುಗಂಟೆಯಲ್ಲಿ ಗರ್ಭಿಣಿಯನ್ನು ತಮ್ಮ ಆಟೊ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದ ಆಶಾ ಕಾರ್ಯಕರ್ತೆ ರಾಜೀವಿ ಅವರ ಉದಾತ್ತ ಕಾರ್ಯವನ್ನು ಶ್ಲಾಘಿಸುತ್ತೇನೆ’ ಎಂದು ವೆಂಕಯ್ಯನಾಯ್ಡು ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.
ಆಶಾ ಕಾರ್ಯಕರ್ತೆ ರಾಜೀವಿ ಅವರ ಕುರಿತು ‘ಪ್ರಜಾವಾಣಿ’ಯ ಶುಕ್ರವಾರದ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಈ ಕುರಿತು ಪತ್ರಿಕೆಗೆ ಧನ್ಯವಾದ ಹೇಳಿದ ರಾಜೀವಿ ಅವರು ‘ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಅಭಿನಂದಿಸಿರುವ ವಿಚಾರ ತಿಳಿದು ತುಂಬಾ ಖುಷಿಯಾಗುತ್ತಿದೆ’ ಎಂದರು.
‘ಹಿಂದೆಯೂ ಹಲವು ಸಲ ಗರ್ಭಿಣಿಯರನ್ನು ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದೆ. ಈ ಬಾರಿ ಮಾಧ್ಯಮಗಳು ನನ್ನ ಕಾರ್ಯವನ್ನು ಗುರುತಿಸಿ ಪ್ರಚಾರ ನೀಡಿವೆ. ಮುಂದೆಯೂ ಸಮಾಜಕ್ಕೆ ಕೈಲಾದ ಸೇವೆಯನ್ನು ಮಾಡುತ್ತೇನೆ’ ಎಂದರು.