ಭಾಗ್ಪತ್: ಮೌಲ್ವಿಯೊಬ್ಬರ ಗಡ್ಡವನ್ನು ಎಳೆದು ‘ಜೈ ಶ್ರೀರಾಮ್’ ಹೇಳುವಂತೆ ಒತ್ತಾಯಿಸಿದ ಆರೋಪದಡಿ 12 ಯುವಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಮೇಲ್ನೋಟಕ್ಕೆ ಇದೊಂದು ದೈಹಿಕ ಹಲ್ಲೆ ಎಂದು ತಿಳಿದುಬರುತ್ತಿದೆ. ಮೌಲ್ವಿ ಇಮಾಮ್ ಇಮ್ಲಕ್ ಉರ್ ರೆೆಹೆಮಾನ್ ಅವರ ದೂರಿನ ಅನ್ವಯ 12 ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್ಪಿ ಶೈಲೇಶ್ ಕುಮಾರ್ ಪಾಂಡೆ ಭಾನುವಾರ ಹೇಳಿದರು.
ಮುಜಫರ್ನಗರದ ನಿವಾಸಿ ಇಮಾಮ್ ಅವರು, ಶನಿವಾರ ತಮ್ಮ ಹಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಅಡ್ಡಗಟ್ಟಿದ ಯುವಕರು, ಹೊಡೆದು, ಅವರ ಗಡ್ಡವನ್ನು ಎಳೆದಿದ್ದಾರೆ. ನಂತರ, ಅವರಿಗೆ ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿದ್ದಾರೆ ಎಂದು ಇಮಾನ್ ಆರೋಪಿಸಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.
ಘಟನೆಯ ವೇಳೆ ಇಮಾಮ್ ಕೂಗಿಕೊಂಡಾಗ, ಅವರ ಹಳ್ಳಿಯ ಇಬ್ಬರು ಅವರನ್ನು ರಕ್ಷಿಸಿದ್ದಾರೆ ಎಂದು ಅವರು ಹೇಳಿದರು.
‘ನಿನ್ನ ಗಡ್ಡ ಬೊಳಿಸಿಕೊಂಡ ಬಳಿಕವಷ್ಟೇ ನೀನು ಹಳ್ಳಿಗೆ ಬರಬೇಕು’ ಎಂದು ಯುವಕರು ಹೇಳಿದ್ದಾರೆ ಎಂದು ಇಮಾಮ್ ದೂರಿದ್ದಾರೆ.