ದಾಬೋಲ್ಕರ್ ಹತ್ಯೆ ಆರೋಪಿಗಳು ಸಿಬಿಐ ವಶಕ್ಕೆ

ಪುಣೆ: ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಲು ಸಹಾಯ ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ವಕೀಲ ಮತ್ತು ಸನಾತನ ಸಂಸ್ಥೆಯ ಸದಸ್ಯನನ್ನು ಪುಣೆ ನ್ಯಾಯಾಲಯ ಸಿಬಿಐ ವಶಕ್ಕೆ ಒಪ್ಪಿಸಿದೆ.
ಭಾನುವಾರ ನಡೆದ ವಿಚಾರಣೆಯಲ್ಲಿ ಆರೋಪಿಗಳಾದ ವಕೀಲ ಸಂಜೀವ್ ಪುನಲೇಕರ್ ಮತ್ತು ಸನಾತನ ಸಂಸ್ಥೆಯ ಸದಸ್ಯ ವಿಕ್ರಂ ಬಾವೆ ಅವರನ್ನು ತನಿಖೆಗೆ ಒಳಪಡಿಸಲು ಜೂನ್ 1ರವರೆಗೆ ವಶಕ್ಕೆ ಪಡೆಯುವಂತೆ ಸಿಬಿಐಗೆ ನ್ಯಾಯಾಧೀಶ ಎಸ್.ಎನ್.ಸೋನವಾನೆ ಸೂಚಿಸಿದ್ದಾರೆ.
ನರೇಂದ್ರ ದಾಬೋಲ್ಕರ್ ಮತ್ತು ಗೌರಿ ಲಂಕೇಶ್ ಹತ್ಯೆ ಆರೋಪಿ ಶರದ್ ಕಲಸ್ಕರ್ ಜೊತೆಗೆ ವಕೀಲ ಪುನಲೇಕರ್ ಕೈ ಜೋಡಿಸಿರುವ ಕುರಿತು ಬಲವಾದ ಸಾಕ್ಷಾಧಾರಗಳಿವೆ. ಅಲ್ಲದೆ, ಇನ್ನೊಬ್ಬ ಆರೋಪಿ ವಿಕ್ರಂ ಬಾವೆ 2008ರಲ್ಲಿ ನಡೆದ ಗಡ್ಕರಿ ರಂಗಯಾತನ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ ಮತ್ತು ಮಾಲೆಗಾಂವ್ ಸ್ಫೋಟದ ಕುರಿತು ಪುಸ್ತಕ ಬರೆದಿದ್ದಾನೆ ಎಂದು ಸಿಬಿಐ ಕೋರ್ಟ್ಗೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ.
ಇದುವರೆಗೂ ಸಿಬಿಐ ದಾಬೋಲ್ಕರ್, ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ವೀರೇಂದ್ರ ಸಿನ್ಹ ತಾವ್ಡೆ, ಸಚಿನ್ ಅದುರೆ ಮತ್ತು ಕಲಾಸ್ಕರ್ ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಿದೆ. ಗೌರಿ ಹತ್ಯೆಗೆ ಸಂಬಂಧಿಸಿದಂತೆ ಬಂಗೇರ ಮತ್ತು ಕಾಳೆ ಎಂಬುವರನ್ನು ಬಂಧಿಸಿದೆ. ನರೇಂದ್ರ ದಾಬೋಲ್ಕರ್ ಅವರು ದುಷ್ಕರ್ಮಿಗಳ ಗುಂಡಿಗೆ ಆಗಸ್ಟ್ 20, 2013ರಂದು ಬಲಿಯಾಗಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.