ತಿರುಪತಿ: ಜೂನ್ 11ರಿಂದ ತಿರುಪತಿಯಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ನೀಡುವ ಮುನ್ನ ಕೈಗೊಳ್ಳಬೇಕಾಗಿರುವ ಸುರಕ್ಷತಾ ಕ್ರಮಗಳ ಕುರಿತು ಸೋಮವಾರ ತಾಲೀಮು ಆರಂಭಗೊಂಡಿತು. ಇದು ಒಟ್ಟು ಮೂರು ದಿನಗಳು ನಡೆಯಲಿದೆ.
ಗರ್ಭಗುಡಿಯಿಂದ ಸುಮಾರು 100 ಅಡಿ ದೂರದಲ್ಲಿರುವ ದ್ವಾರಪಾಲಕ ಮಂಟಪದಿಂದಲೇ ಸಿಬ್ಬಂದಿ ಮತ್ತು ಇತರರು ವೆಂಕಟೇಶ್ವರನ ದರ್ಶನ ಪಡೆದರು. ಹುಂಡಿಗೆ ಹಣ ಹಾಕುವ ಮೊದಲು ಸ್ಯಾನಿಟೈಸರ್ನಿಂದ ಕೈಗಳನ್ನು ಸ್ವಚ್ಛ ಮಾಡಿಕೊಂಡರು.
ದೇಗುಲದ ಆರು ಸಾವಿರ ನೌಕರರು ಈ ತಾಲೀಮಿನಲ್ಲಿ ಪಾಲ್ಗೊಂಡಿದ್ದರು. ಜನಸಂದಣಿಯನ್ನು ನಿಯಂತ್ರಿಸುವವರು ಎಲ್ಲರೂ ವೈಯಕ್ತಿಕ ಸುರಕ್ಷತಾ ಸಾಧನಗಳನ್ನು ಧರಿಸಿದ್ದರು. ತಾಲೀಮಿನ ಬಳಿಕ ದೇವರ ದರ್ಶನಕ್ಕೆ ಪ್ರತಿ ದಿನ ಕೇವಲ 6000 ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುವುದು.