ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಧ್ಯಕ್ಷ ಸ್ಥಾನಕ್ಕೇರಿದ ಜೆ.ಪಿ ನಡ್ಡಾ ಯಾರು? ಅವರ ರಾಜಕೀಯ ಹಿನ್ನೆಲೆ ಏನು?

Last Updated 21 ಜನವರಿ 2020, 2:45 IST
ಅಕ್ಷರ ಗಾತ್ರ
ADVERTISEMENT
""
""

ದೇಶದಲ್ಲಿ ಉತ್ತುಂಗದಲ್ಲಿರುವ ಬಿಜೆಪಿಯಂಥ ಪಕ್ಷಕ್ಕೆ ಹೊಸ ಅಧ್ಯಕ್ಷನ ಆಗಮನವಾಗಿದೆ.ಅಮಿತ್‌ ಶಾ ಎಂಬ ರಾಜಕೀಯ ಚತುರನಿಂದ ತೆರವಾದ ಈ ಸ್ಥಾನವನ್ನು ಪಕ್ಷದ ಕಾರ್ಯಾಧ್ಯಕ್ಷ ಜಗತ್‌ ಜೆ.ಪಿ ನಡ್ಡಾ ಎಂದೇ ಪ್ರಸಿದ್ಧರಾದ ಜಗತ್‌ ಪ್ರಕಾಶ್‌ ನಡ್ಡಾಅವರು ಅಲಂಕರಿಸಿದ್ದಾರೆ.


ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರ ನಂಬುಗೆಯ ವ್ಯಕ್ತಿತ್ವದ ನಾಯಕ ಜೆ.ಪಿ ನಡ್ಡಾ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದಪ್ರಣೀತ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಿಂದ ಬೆಳೆದು ಬಂದವರು. ಅವರ ರಾಜಕೀಯ ಬೇರುಗಳಿರುವುದು ರಾಷ್ಟ್ರೀಯ ಆರ್‌ಎಸ್‌ಎಸ್‌ನಲ್ಲೇ. ತಳಮಟ್ಟದ ರಾಜಕಾರಣದಿಂದ ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಪ್ರಾಮುಖ್ಯತೆ ಪಡೆಯುವಲ್ಲಿ ಯಶಸ್ವಿಯಾಗಿರುವ ನಡ್ಡಾ, ಇದನ್ನೆಲ್ಲ ಅಷ್ಟು ಸುಲಭಕ್ಕೆ ದಕ್ಕಿಸಿಕೊಂಡದ್ದಲ್ಲ. ಉತ್ತರ ಪ್ರದೇಶದಲ್ಲಿ ರಚನೆಯಾಗಿದ್ದ ಮಹಾಘಟಬಂಧನವನ್ನೇ ದೂಳಿಪಟ ಮಾಡಿದ ಅವರ ಸಂಘಟನ ಚಾತುರ್ಯ ಅವರನ್ನು ಬಿಜೆಪಿಯ ಅತ್ಯುನ್ನತ ಸ್ಥಾನಕ್ಕೆರಿಸಿದೆ.

ನಡ್ಡಾ ಅವರು ಮೋದಿ ಮತ್ತು ಅಮಿತ್‌ ಶಾ ಅವರಿಗೆ ಆಪ್ತರಾದರೂ, ರಾಷ್ಟ್ರ ರಾಜಕಾರಣಕ್ಕೆ ಬಂದಿದ್ದು ಮಾತ್ರ ನಿತಿನ್‌ ಗಡ್ಕರಿ ಅವರ ಮೂಲಕ. 2010ರಲ್ಲಿ ಗಡ್ಕರಿ ಪಕ್ಷದ ರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡ್ಡಾ ಅವರನ್ನು ತಮ್ಮ ತಂಡದಲ್ಲಿ ಸೇರಿಸಿಕೊಂಡಿದ್ದರು. ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನೂ ನೀಡಿದ್ದರು.

ನಡ್ಡಾ ಜನಿಸಿದ್ದು ಡಿ.2ರ 1960ರಲ್ಲಿ. ನಾರಾಯಣ್‌ ಲಾಲ್‌ ನಡ್ಡಾ ಮತ್ತು ಕೃಷ್ಣಾ ನಡ್ಡಾ ಅವರ ಪುತ್ರ. ಪಾಟ್ನಾ ‘ಸೆಂಟ್‌ ಕ್ಸೇವಿಯರ್‌’ ಶಾಲೆಯಲ್ಲಿ ಅವರು ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಪಾಟ್ನಾ ವಿಶ್ವವಿದ್ಯಾಲಯದಿಂದಲೇ ಬಿ.ಎ ಪದವಿ ಪಡೆದುಕೊಂಡಿದ್ದಾರೆ. ಹಿಮಾಚಲಪ್ರದೇಶದ ಶಿಮ್ಲಾ ವಿವಿಯಿಂದ ಕಾನೂನು ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ನಡ್ಡಾ ಈಜು ಪಟುವೂ ಹೌದು. ಚಿಕ್ಕಂದಿನಲ್ಲಿ ಅವರು ರಾಷ್ಟ್ರೀಯ ಕಿರಿಯರ ಈಜು ಸ್ಪರ್ಧೆಯಲ್ಲಿ ಬಿಹಾರ ತಂಡವನ್ನು ಪ್ರತಿನಿಧಿಸಿದ್ದರು. ಡಿ. 11, 1991ರಲ್ಲಿ ಮಲ್ಲಿಕಾ ಅವರನ್ನು ವರಿಸಿರುವ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ನಡ್ಡಾ ಅವರ ತಂದೆ ನಾರಾಯಣ್‌ ಲಾಲ್‌ ನಡ್ಡಾ ಅವರು ಪಟ್ನಾ ವಿಶ್ವವಿದ್ಯಾಲಯದ ಕುಲಪತಿಯೂ ಆಗಿದ್ದರು.
1978ರಲ್ಲಿ ಎಬಿವಿಪಿ ಸೇರುವುದರೊಂದಿಗೆ ನಡ್ಡಾ ಅವರ ರಾಜಕೀಯ ಯಾನ ಆರಂಭವಾಗಿತ್ತು. 1991–94ರಲ್ಲಿ ನಿತಿನ್‌ ಗಡ್ಕರಿ, ಅಮಿತ್‌ ಶಾ ಅವರೊಂದಿಗೆ ನಡ್ಡಾ ಅವರು ಬಿಜೆಪಿಯ ಯುವ ಮೋರ್ಚಾದಲ್ಲಿ ಕೆಲಸ ಮಾಡಿದ್ದರು. ನಡ್ಡಾ ಅವರ ಪತ್ನಿ ಮಲ್ಲಿಕಾ ಅವರು ಹಿಮಾಚಲಪ್ರದೇಶದಲ್ಲಿ ಇತಿಹಾಸ ಪ್ರಾದ್ಯಾಪಕಿಯಾಗಿದ್ದು, ಅವರೂ ಎಬಿವಿಪಿ ಹಿನ್ನೆಲೆಯುಳ್ಳವರು. 1988–1999ರ ದಶಕದ ಅವಧಿಗೆ ಮಲ್ಲಿಕಾ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.

1993ರಲ್ಲಿ ನಡ್ಡಾ ಮೊದಲಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಹಿಮಾಚಲ ಪ್ರದೇಶದ ಬಿಲಾಸ್‌ಪುರ (ಸಾದರ್‌)ನಿಂದ ಅವರು ಮೊದಲ ಬಾರಿಗೆ ಆಯ್ಕೆಯಾಗಿದ್ದರು. 1998ರಲ್ಲಿ ಅವರು ಮರು ಆಯ್ಕೆಯಾಗಿದ್ದರು. ಅಲ್ಲದೆ, ಅಂದಿನ ಸರ್ಕಾರದಲ್ಲಿ ಸಚಿವರೂ ಆಗಿದ್ದರು. 2003ರಲ್ಲಿ ವಿಧಾನಸಭೆ ಚುನಾವಣೆ ಸೋತರಾದರೂ, 207ರಲ್ಲಿ ಮರು ಆಯ್ಕೆಯಾದರು. 2007–2012ರ ಬಿಜೆಪಿ ಸರ್ಕಾರದ ಮಂತ್ರಿ ಮಂಡಲದಲ್ಲಿ ಅರಣ್ಯ ಖಾತೆ ಸಚಿವರಾಗಿದ್ದ ನಡ್ಡಾ 2010ರಲ್ಲಿ ಅಂದಿನ ಮುಖ್ಯಮಂತ್ರಿ ಪ್ರೇಮ್‌ಕುಮಾರ್‌ ಧುಮಾಲ್‌ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರದಿಂದ ಹೊರ ಬಂದಿದ್ದರು.

ಅಮಿತ್‌ ಶಾ ಅವರು ಬಿಜೆಪಿಯ ರಾಷ್ಟ್ರ ಘಟಕದ ಅಧ್ಯಕ್ಷರಾದ ನಂತರ ಜೆ.ಪಿ ನಡ್ಡಾ ಅವರನ್ನು ಪಕ್ಷದಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರು. 2012ದಿಂದಲೂ ರಾಜ್ಯಸಭೆ ಸದಸ್ಯರಾಗಿರುವ ಅವರು ಮೋದಿ ನೇತೃತ್ವದ ಸರ್ಕಾರದಲ್ಲಿ ಕುಟುಂಬ ಕಲ್ಯಾಣ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದರು.

2017ರಲ್ಲಿ ನಡೆದ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತಾದರೂ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್‌ಕುಮಾರ್‌ ಧುಮಾಲ್‌ ಸೋಲುವ ಮೂಲಕ ಹೊಸ ಮುಖ್ಯಮಂತ್ರಿಯ ಹುಡುಕಾಟ ಆರಂಭವಾಗಿತ್ತು. ಆಗ ಮುಖ್ಯಮಂತ್ರಿ ಸ್ಥಾನಕ್ಕೆ ನಡ್ಡಾ ಅವರ ಹೆಸರು ಪ್ರಬಲವಾಗಿ ಕೇಳಿಬಂದಿತ್ತಾದರೂ, ಕೊನೆಗೆ ಜೈರಾಮ್‌ ಠಾಕೂರ್‌ ಅವರು ಮುಖ್ಯಮಂತ್ರಿಯಾಗಿದ್ದರು. ಅದಾದ ನಂತರ ಅವರು ರಾಷ್ಟ್ರ ರಾಜಕಾರಣದತ್ತಲೇ ಹೆಚ್ಚು ಕ್ರಿಯಾಶೀಲರಾದರು.

2014ರ ಲೋಕಸಭೆ ಚುನಾವಣೆಯಲ್ಲಿ ಖುದ್ದು ಅಮಿತ್‌ ಶಾ ಅವರೇ ಮುಂದೆ ನಿಂತು ಉತ್ತರ ಪ್ರದೇಶದ ಚುನಾವಣೆ ಕೆಲಸಗಳನ್ನು ನಿಭಾಯಿಸಿದ್ದರಿಂದ ಆ ಚುನಾವಣೆಯಲ್ಲಿ ಬಿಜೆಪಿ 71 ಸ್ಥಾನಗಳನ್ನು ಗೆದ್ದಿ ಬೀಗಿತ್ತು. ಆದರೆ, 2019ರ ಚುನಾವಣೆ ಹೊತ್ತಿಗೆ ಉತ್ತರ ಪ್ರದೇಶದ ರಾಜಕೀಯ ಚಿತ್ರಣ ಬದಲಾಗಿ ಬದ್ಧ ವೈರಿಗಳಾಗಿದ್ದ ಎಸ್‌ಪಿ–ಬಿಎಸ್‌ಪಿಗಳು ಒಂದಾಗಿ ಬಿಜೆಪಿಯನ್ನು ಎದುರಿಸಲು ಸಿದ್ಧವಾಗಿದ್ದವು. ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಅಸಂಭವ ಎನ್ನುವಂಥ ವಿಶ್ಲೇಷಣೆಗಳು ವ್ಯಾಪಕವಾಗಿತ್ತಾದರೂ, ಅದನ್ನೆಲ್ಲ ಮೆಟ್ಟಿದ ಬಿಜೆಪಿ 62 ಸ್ಥಾನಗಳಲ್ಲಿ ಗೆದ್ದಿತ್ತು. ಹಿಂದಿನ ಬಾರಿಗಿಂತಲೂ ಕೇವಲ 9 ಸ್ಥಾನಗಳನ್ನಷ್ಟೇ ಅದು ಕಳೆದುಕೊಂಡಿತ್ತು. ಈ ದೊಡ್ಡ ಗೆಲುವಿನ ಹಿಂದೆ ಈ ಬಾರಿ ಕೆಲಸ ಮಾಡಿದ್ದವರು ಜೆ.ಪಿ ನಡ್ಡಾ.

ಹಿಮಾಚಲ ಪ್ರದೇಶದವಾರದ ಜೆ.ಪಿ ನಡ್ಡಾ ಉತ್ತರ ಪ್ರದೇಶದಂಥ ದೊಡ್ಡ ರಾಜ್ಯದ ರಾಜಕಾರಣದ ಅಖಾಡಕ್ಕಿಳಿದು, ಅಲ್ಲಿನರಾಜಕೀಯ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗು ಮಾಡಿದ್ದು ಅವರ ಸಂಘಟನಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.

2014ರಲ್ಲಿ ಉತ್ತರ ಪ್ರದೇಶವನ್ನು ಒಲಿಸಿಕೊಂಡ ಕಾರಣಕ್ಕೇ ಸುದ್ದಿಯಾಗಿ, ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷರಾದವರು ಅಮಿತ್‌ ಶಾ. ಅದೇ ರೀತಿ 2019ರಲ್ಲಿ ಉತ್ತರ ಪ್ರದೇಶವನ್ನು ಒಲಿಸಿಕೊಂಡವರು ಜೆ.ಪಿ ನಡ್ಡಾ. ಸಂಘಟನೆಯಲ್ಲಿ ಅಮಿತ್‌ ಶಾ ಅವರಷ್ಟೆ ನಡ್ಡಾ ಕೂಡ ಕಠಿಣ ಪರಿಶ್ರಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT