ಅಮರಾವತಿ: ರಾಜ್ಯ ಚುನಾವಣಾ ಆಯುಕ್ತರ ಅಧಿಕಾರಾವಧಿಯನ್ನು 5ರಿಂದ 3ವರ್ಷಕ್ಕೆ ಇಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಆಂಧ್ರಪ್ರದೇಶ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿತು.
ಮದ್ರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ವಿ.ಕನಕರಾಜ್ ಅವರನ್ನು ರಾಜ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ವಜಾ ಮಾಡಿರುವ ಹೈಕೋರ್ಟ್, ನಿಮ್ಮಗಡ್ಡ ರಮೇಶಕುಮಾರ್ ಅವರನ್ನು ಈ ಹುದ್ದೆಯಲ್ಲಿ ಪುನರ್ಸ್ಥಾಪಿಸಿ ಆದೇಶಿಸಿದೆ.
‘ರಾಜ್ಯ ಚುನಾವಣಾ ಆಯುಕ್ತರ ಅಧಿಕಾರಾವಧಿಯನ್ನು ಕಡಿತಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇದು ಮುಖ್ಯಮಂತ್ರಿ ವೈ.ಎಸ್.ಜಗನಮೋಹನ್ ರೆಡ್ಡಿ ಅವರಿಗೆ ತೀವ್ರ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಕೋವಿಡ್–19 ಪಿಡುಗಿನ ಕಾರಣ ನೀಡಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಿ ಜಗನಮೋಹನ್ ರೆಡ್ಡಿ ಕೆಂಗಣ್ಣಿಗೆ ಗುರಿಯಾಗಿದ್ದ ರಮೇಶಕುಮಾರ್ ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಲಾಗಿತ್ತು.