ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಹಿಂದಿನ ಶಕ್ತಿಯಾಗಿದ್ದ ಜೇಟ್ಲಿ

Last Updated 25 ಆಗಸ್ಟ್ 2019, 11:26 IST
ಅಕ್ಷರ ಗಾತ್ರ

ನವದೆಹಲಿ: ಪ್ರಚಂಡ ಬಹುಮತದೊಂದಿಗೆ ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಸವಾಲುಗಳು ಹಲವಿದ್ದವು. ‘ಎಂಥ ಸವಾಲನ್ನಾದರೂ ಗೆಲ್ಲಬಲ್ಲೆ’ ಎಂಬ ವಿಶ್ವಾಸವನ್ನು ಅವರಲ್ಲಿ ಮೂಡಿಸಿದ್ದವರು ಬಿಜೆಪಿಯ ಹಿರಿಯ ಮುಖಂಡ ಅರುಣ್‌ ಜೇಟ್ಲಿ. ಆದರೆ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಸ್ವಲ್ಪ ಮುನ್ನವೇ ಅರುಣ್‌ ಜೇಟ್ಲಿ ಅವರು ‘ಈ ಬಾರಿ ನನ್ನನ್ನು ಬಿಟ್ಟುಬಿಡಿ’ ಎಂದು ಮೋದಿಗೆ ಪತ್ರ ಬರೆದರು. ಜೇಟ್ಲಿ ಅವರ ಪತ್ರವು ಮೋದಿ ಅವರ ಶಕ್ತಿಯೇ ಉಡುಗಿ ಹೋಗುವಂತೆ ಮಾಡಿತ್ತು.

ಮೋದಿ ನೇತೃತ್ವದ ಮೊದಲ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ಸಚಿವರಾಗಿದ್ದ ಜೇಟ್ಲಿ ಅವರು ಸರ್ಕಾರದ ಕೊನೆಯ ವರ್ಷದಲ್ಲಿ ಆರೋಗ್ಯದ ಸಮಸ್ಯೆ ಎದುರಿಸಿದ್ದರು. ಹಣಕಾಸು ಸಚಿವರಾಗಿದ್ದರೂ ಕೊನೆಯ ಬಜೆಟ್‌ ಮಂಡಿಸಲು ಅವರಿಂದ ಸಾಧ್ಯವಾಗಲಿಲ್ಲ. ಅವರ ಪರವಾಗಿ ರಾಜ್ಯ ಸಚಿವ ಪೀಯೂಶ್‌ ಗೋಯಲ್‌ ಬಜೆಟ್‌ ಮಂಡಿಸಿದ್ದರು. ಅಲ್ಲಿಂದ ಅವರ ಆರೋಗ್ಯ ಅಷ್ಟಾಗಿ ಸುಧಾರಿಸಲಿಲ್ಲ. ಆ ಕಾರಣಕ್ಕಾಗಿಯೇ ಹೊಸ ಸರ್ಕಾರ ರಚಿಸುವಾಗ, ‘ನನ್ನ ಆರೋಗ್ಯ ಸರಿ ಇಲ್ಲ, ಆದ್ದರಿಂದ ನನಗೆ ಯಾವುದೇ ಜವಾಬ್ದಾರಿ ಕೊಡಬೇಡಿ’ ಎಂದು ಮೋದಿಗೆ ಮನವಿ ಸಲ್ಲಿಸಿದರು. ಮೋದಿ ಅವರು ಅಮಿತ್‌ ಶಾ ಜೊತೆಗೂಡಿ ಜೇಟ್ಲಿ ಅವರ ಮನೆಗೇ ಹೋಗಿ ಮನವೊಲಿಸುವ ಪ್ರಯತ್ನ ಮಾಡಿದ್ದರು ಎಂದರೆ, ಜೇಟ್ಲಿ ಅವರ ಅಗತ್ಯ ಮೋದಿಗೆ ಎಷ್ಟಿತ್ತು ಎಂಬುದು ವ್ಯಕ್ತವಾಗುತ್ತದೆ. ಮೋದಿ ಸರ್ಕಾರದ ‘ಟ್ರಬಲ್‌ ಶೂಟರ್‌’ ಎಂದೇ ಜೇಟ್ಲಿ ಅವರನ್ನು ಪರಿಗಣಿಸಲಾಗಿತ್ತು.

ಮೋದಿ– ಜೇಟ್ಲಿ ಸಂಬಂಧ ಈಚಿನ ನಾಲ್ಕೈದು ವರ್ಷಗಳದ್ದಾಗಿರಲಿಲ್ಲ. ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೇ, ಅವರಲ್ಲಿರುವ ನಾಯಕತ್ವ ಗುಣವನ್ನು ಗುರುತಿಸಿ, ಅವರನ್ನು ರಾಷ್ಟ್ರರಾಜಕಾರಣಕ್ಕೆ ಎಳೆದು ತರಬೇಕು ಎಂದವರಲ್ಲಿ ಜೇಟ್ಲಿ ಒಬ್ಬರಾಗಿದ್ದರು (ಮೋದಿ ಅವರನ್ನು ಗುಜರಾತ್‌ ಮುಖ್ಯಮಂತ್ರಿ ಮಾಡಬೇಕು ಎಂದು ವಾದಿಸಿದವರಲ್ಲೂ ಜೇಟ್ಲಿ ಒಬ್ಬರು ಎಂದು ಬಿಜೆಪಿ ನಾಯಕರು ಹೇಳುತ್ತಾರೆ).

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಬೇಕು ಎಂದು ವಾದಿಸಿದ ಬಿಜೆಪಿ ನಾಯಕರಲ್ಲಿ ಜೇಟ್ಲಿ ಪ್ರಮುಖರು. ಇದು ಎಲ್‌.ಕೆ. ಅಡ್ವಾಣಿ, ಮುರಳಿಮನೋಹರ ಜೋಶಿ ಅವರಂಥ ಹಿರಿಯರಿಗೆ ರುಚಿಸಿರಲಿಲ್ಲ. ಆದರೆ, ಜೇಟ್ಲಿ ಅವರ ಒತ್ತಡವು ಮೋದಿ ಅವರನ್ನು ರಾಷ್ಟ್ರರಾಜಕಾರಣಕ್ಕೆ ಎಳೆದು ತಂದಿದ್ದಲ್ಲದೆ ಪ್ರಧಾನಿಯ ಕುರ್ಚಿಯಲ್ಲೂ ಕೂರಿಸಿಬಿಟ್ಟಿತು.

ಬದಲಾದ ಸಮೀಕರಣ: ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಜೇಟ್ಲಿ ಅವರು ಒಟ್ಟಾರೆ ಸಚಿವ ಸಂಪುಟದ ಸಮೀಕರಣವನ್ನೇ ಬದಲಿಸಿಬಿಟ್ಟರು. ಸಂಪುಟದಲ್ಲಿ ಪ್ರಧಾನಿಯ ನಂತರದ ಸ್ಥಾನ ಸಾಮಾನ್ಯವಾಗಿ ಗೃಹಸಚಿವರಿಗೆ ಸಲ್ಲುತ್ತದೆ. ಆದರೆ ಮೋದಿ ಅವರ ಮೊದಲ ಅವಧಿಯ ಸರ್ಕಾರದಲ್ಲಿ ಜೇಟ್ಲಿ ಅವರು ‘ನಂ–2’ ಎನಿಸಿದ್ದರು.

ಜನಧನ ಯೋಜನೆ, ಆಧಾರ್‌ ಜೋಡಣೆ, ನೋಟು ರದ್ದತಿ, ಜಿಎಸ್‌ಟಿ ಜಾರಿ, ಬೇನಾಮಿ ಆಸ್ತಿ ಕಾಯ್ದೆ ಮುಂತಾಗಿ ಬಿಜೆಪಿ ಸರ್ಕಾರದ ಬಹುತೇಕ ಎಲ್ಲಾ ಪ್ರಮುಖ ಯೋಜನೆಗಳು ಹಣಕಾಸು ಸಚಿವಾಲಯದ ಮೂಲಕ ಜಾರಿಗೊಂಡವು. ಜೇಟ್ಲಿ ಅವರ ಮೇಲೆ ಮೋದಿಗೆ ಇದ್ದ ಭರವಸೆ ಇದಕ್ಕೆ ಕಾರಣ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಕಾನೂನು ಸಚಿವ ಅಲ್ಲದಿದ್ದರೂ, ಮೋದಿ ಸರ್ಕಾರಕ್ಕೆ ಎದುರಾದ ಎಲ್ಲಾ ಕಾನೂನು ಸುಕ್ಕುಗಳನ್ನು ಬಿಡಿಸುವಲ್ಲಿ ಜೇಟ್ಲಿ ನೆರವಾಗಿದ್ದರು ಎಂಬುದೂ ಅಷ್ಟೇ ನಿಜ. ರಕ್ಷಣಾ ಸಚಿವರಲ್ಲದಿದ್ದರೂ, ರಫೇಲ್‌ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಎದುರಾದ ಸವಾಲುಗಳನ್ನು ಎದುರಿಸಿ ಸರ್ಕಾರಕ್ಕೆ ರಕ್ಷಣೆ ನೀಡಿದ್ದರು. ನೋಟು ರದ್ದತಿ, ಜಿಎಸ್‌ಟಿ ವಿಚಾರದಲ್ಲೂ ಸರ್ಕಾರದ ರಕ್ಷಣೆಗೆ ಬಂದದ್ದು ಜೇಟ್ಲಿಯೇ. ಗೋವಾ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗಿ, ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿದ್ದ ಮನೋಹರ ಪರ್ರೀಕರ್‌ ಅವರು ಗೋವಾಗೆ ಮರಳಬೇಕಾದ ಸಂದರ್ಭ ಬಂದಾಗ ಮೋದಿ ಅವರು ರಕ್ಷಣಾ ಸಚಿವಾಲಯವನ್ನು ತಾತ್ಕಾಲಿಕವಾಗಿ ಜೇಟ್ಲಿ ಅವರ ಕೈಗೊಪ್ಪಿಸಿದ್ದರು. ಆ ನಂತರ ನಿರ್ಮಲಾ ಸೀತಾರಾಮನ್‌ ಅವರಿಗೆ ಆ ಖಾತೆಯನ್ನು ವಹಿಸಲಾಗಿತ್ತು.

ಮೋದಿ ಅವರ ಆತ್ಮೀಯ ಮತ್ತು ವಿಶ್ವಾಸಾರ್ಹ ಸಹೋದ್ಯೋಗಿಗಳ ಪಟ್ಟಿಯಲ್ಲಿ ಈಚೆಗೆ ನಿಧನ ಹೊಂದಿರುವ ಸುಷ್ಮಾ ಸ್ವರಾಜ್‌ ಅವರೂ ಇದ್ದರು. ಮೊದಲ ಅವಧಿಯ ಸರ್ಕಾರದಲ್ಲಿ ಆರಂಭದ ದಿನಗಳಲ್ಲಿ ಮೋದಿ ಅವರ ಅನುಪಸ್ಥಿತಿಯಲ್ಲಿ ಸುಷ್ಮಾ ಅವರು ಸಚಿವ ಸಂಪುಟದ ಸಭೆಯ ಅಧ್ಯಕ್ಷತೆ ವಹಿಸುತ್ತಿದ್ದರು. ಆನಂತರ ರಾಜನಾಥ್‌ ಸಿಂಗ್‌ ಅವರಿಗೆ ಆ ಜವಾಬ್ದಾರಿ ವಹಿಸಲಾಗಿತ್ತು. ಕೊನೆಯ ಕೆಲವು ವರ್ಷಗಳಲ್ಲಿ ಮೋದಿ ಅನುಪಸ್ಥಿತಿಯಲ್ಲಿ ಜೇಟ್ಲಿ ಅವರೇ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸುತ್ತಿದ್ದರು. ಮೋದಿ ಸರ್ಕಾರದಲ್ಲಿ ಜೇಟ್ಲಿ ಪ್ರಶ್ನಾತೀತವಾಗಿ ‘ನಂ 2’ ಆಗಿದ್ದರು ಎಂಬುದಕ್ಕೆ ಇದು ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT